ಬೆಂಗಳೂರು: ಕೆನರಾ ಬ್ಯಾಂಕ್ ವ್ಯವಸ್ಥಾಪಕರೊಬ್ಬರನ್ನು ಅಪಹರಿಸಿ, ಸುಲಿಗೆ ಮಾಡಿರುವ ಪ್ರಕರಣ ಜಯನಗರ ಮೆಟ್ರೊ ನಿಲ್ದಾಣ ಬಳಿ ನಡೆದಿದೆ.
ಈ ಕುರಿತು ವ್ಯವಸ್ಥಾಪಕ ಕೆ. ಸರ್ವೇಶ್ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ‘ಇದೇ 30ರಂದು ರಾತ್ರಿ 7.45ರ ಸುಮಾರಿಗೆ ಜಯನಗರ ಮೆಟ್ರೊ ನಿಲ್ದಾಣದ ಸರ್ವಿಸ್ ರಸ್ತೆಯಲ್ಲಿ ಕಾರು ನಿಲ್ಲಿಸಿ, ಮೊಬೈಲ್ನಲ್ಲಿ ಮಾತನಾಡುವಾಗ ಅಲ್ಲಿಗೆ ಬಂದ ಸುಮಾರು 30–35 ವರ್ಷದ ಯುವಕನೊಬ್ಬ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ್ದಾನೆ’ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
‘ತನ್ನೊಟ್ಟಿಗೆ ಬರಬೇಕು ಎಂದು ಬೆದರಿಕೆ ಹಾಕಿದ ಯುವಕ, ನನ್ನ ಮೊಬೈಲ್ ಅನ್ನು ಕಾರಿನೊಳಗೆ ಎಸೆದು, ಬಲವಂತವಾಗಿ ತನ್ನ ಸ್ಕೂಟರ್ನಲ್ಲಿ ಕೂರಿಸಿಕೊಂಡು ವಿವಿಧೆಡೆ ಸುತ್ತಾಡಿಸಿ ಕೊನೆಗೆ ವಿ.ವಿ.ಪುರಂ ವೃತ್ತದ ಸಮೀಪದಲ್ಲಿರುವ ಕೆನರಾ ಬ್ಯಾಂಕ್ ಎಟಿಎಮ್ ಬಳಿ ನಿಲ್ಲಿಸಿ, ಒತ್ತಾಯವಾಗಿ ₹ 40 ಸಾವಿರ ಡ್ರಾ ಮಾಡಿಸಿಕೊಂಡು, ಕೈಯಲ್ಲಿದ್ದ ₹ 5,500 ಅನ್ನು ಪಡೆದಿರುವುದಲ್ಲದೆ, ₹2 ಲಕ್ಷ ನೀಡುವಂತೆ ಬೆದರಿಸಿದ್ದಾನೆ’ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಆತನಿಂದ ತಪ್ಪಿಸಿಕೊಂಡ ವ್ಯವಸ್ಥಾಪಕರು ಸಮೀಪದಲ್ಲಿರುವ ಅಪಾರ್ಟ್ಮೆಂಟ್ ಹತ್ತಿರ ಹೋಗಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ದೂರಿನ ಅನ್ವಯ ಪೊಲೀಸರು ಅಪರಹಣ ಹಾಗೂ ಸುಲಿಗೆ ಪ್ರಕರಣ ದಾಖಲಿಸಿದ್ದಾರೆ.
‘ಘಟನೆಯಿಂದ ದೂರುದಾರರು ಆತಂಕಕ್ಕೆ ಒಳಗಾಗಿದ್ದಾರೆ. ಅವರು ಸುಧಾರಿಸಿಕೊಂಡ ನಂತರ ಇನ್ನಷ್ಟು ವಿಚಾರಣೆ ನಡೆಸಲಾಗುವುದ, ಬಳಿಕ ಘಟನೆಯ ಬಗ್ಗೆ ಸ್ಪಷ್ಟವಾದ ಚಿತ್ರಣ ಸಿಗಲಿದೆ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.