ಬೆಂಗಳೂರು: ಫೇಸ್ಬುಕ್ನಲ್ಲಿ ಪರಿಚಿತನಾದ ಯುವಕನೊಬ್ಬ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂದು ಆರೋಪಿಸಿ ಪತ್ರಕರ್ತೆ ಭಾವನಾ ಬೆಳಗೆರೆ ಸುಬ್ರಹ್ಮಣ್ಯಪುರ ಠಾಣೆಗೆ ದೂರು ಕೊಟ್ಟಿದ್ದಾರೆ.
ಈ ಬಗ್ಗೆ ತಮ್ಮ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಪ್ರದೀಪ್ ಪ್ರದೀಪ್ ಕುಮಾರ್ ಪಾಯಲ್’ ಹೆಸರಿನ ಫೇಸ್ಬುಕ್ ಖಾತೆ ಹೊಂದಿರುವ ಯುವಕ ಪದೇ ಪದೇ ವಿಡಿಯೊ ಕರೆ ಮಾಡಲು ಯತ್ನಿಸಿದ್ದ. ಕರೆ ಸ್ವೀಕರಿಸಲು ನಿರಾಕರಿಸಿದ್ದೆ. ಬಳಿಕ ಅಶ್ಲೀಲ ಚಿತ್ರಗಳು ಹಾಗೂ ಸಂದೇಶಗಳನ್ನು ಕಳುಹಿಸಿದ್ದಾನೆ’ ಎಂದು ಬರೆದುಕೊಂಡಿದ್ದಾರೆ.
‘ಓ ಮನಸೇ ಪತ್ರಿಕೆಯನ್ನು ಮತ್ತೆ ಹೊರತರಲು ತಯಾರಿ ನಡೆಸಿದ್ದೆ. ಪತ್ರಿಕೆಯ ಪ್ರಚಾರ ಮಾಡುವ ಉದ್ದೇಶದಿಂದ ಫೇಸ್ಬುಕ್ನಲ್ಲಿ ಖಾತೆ ತೆರೆದಿದ್ದೆ. ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದವರ ಪೂರ್ವಾಪರ ಪರಿಶೀಲಿಸದೆ ಸ್ನೇಹಿತರನ್ನಾಗಿ ಮಾಡಿಕೊಂಡಿದ್ದೆ’ ಎಂದು ಭಾವನಾ ಹೇಳಿದ್ದಾರೆ.
‘ಮೆಸೆಂಜರ್ ಮೂಲಕ ಬಂದಿದ್ದ ಸಂದೇಶಗಳನ್ನು ಶನಿವಾರ ನೋಡುತ್ತಿದ್ದಾಗ ಆತ ಕಳುಹಿಸಿದ ಅಶ್ಲೀಲ ಚಿತ್ರಗಳು ಹಾಗೂ ಸಂದೇಶಗಳು ಕಂಡವು. ಅವುಗಳನ್ನು ನೋಡಿ ಮುಜುಗರಕ್ಕೀಡಾದೆ. ಆ ಬಗ್ಗೆ ಪ್ರತಿಕ್ರಿಯಿಸಿದ್ದಕ್ಕೆ, ‘ಚಿತ್ರಗಳನ್ನು ನೋಡಿ ಹೆದರಿಕೆ ಆಯಿತೇ’ ಎಂದು ಮರು ಸಂದೇಶ ಕಳುಹಿಸಿದ್ದ. ಆತನಿಗೆ ಬುದ್ಧಿ ಕಲಿಸಲು ನಿರ್ಧರಿಸಿದ್ದೇನೆ’ ಎಂದಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.