ADVERTISEMENT

`ಭೂ ಕಬಳಿಕೆ ಆರೋಪ- ಶುದ್ಧ ಸುಳ್ಳು'

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 19:28 IST
Last Updated 6 ಡಿಸೆಂಬರ್ 2012, 19:28 IST

ಬೆಂಗಳೂರು: `ಬಾಪೂಜಿನಗರದ ರೈಲ್ವೆ ಪೈಪ್‌ಲೈನ್ ಕಾರ್ಡ್ ರಸ್ತೆಯಲ್ಲಿ ರೈಲ್ವೆ ಕ್ರಾಸಿಂಗ್ ಸಮೀಪದಲ್ಲೇ ಇರುವ ಜಾಗ ನನ್ನ ಹೆಸರಿನಲ್ಲಿಯೇ ಇದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭೂಮಿ ಕಬಳಿಸುವ ಹುನ್ನಾರ ನಡೆದಿದೆ ಎಂಬ ಆರೋಪ ಶುದ್ಧ ಸುಳ್ಳು. ನಾನು ಅಂತಹ ಯಾವುದೇ ಹುನ್ನಾರ ನಡೆಸಿಲ್ಲ' ಎಂದು ವಿಜಯನಗರ ಆರ್‌ಪಿಸಿ ಲೇಔಟ್‌ನ ಈರಪ್ಪ ಸ್ಪಷ್ಟಪಡಿಸಿದ್ದಾರೆ.

`ಸರ್ಕಾರಿ ಭೂಮಿ ಕಬಳಿಕೆಗೆ ಹುನ್ನಾರ' ಶೀರ್ಷಿಕೆಯಡಿ `ಪ್ರಜಾವಾಣಿ' ಸಂಚಿಕೆಯಲ್ಲಿ ಪ್ರಕಟವಾದ (ನ. 27) ವರದಿಯಲ್ಲಿ ಬಿಬಿಎಂಪಿ ಸದಸ್ಯ ಆರ್.ಚಂದ್ರಶೇಖರಯ್ಯ `ಕೋಟ್ಯಂತರ ಬೆಲೆಬಾಳುವ ಈ ನಿವೇಶನವನ್ನು ಸತ್ಯಾಂಶ ಮರೆಮಾಚುವ ಮೂಲಕ ನಕಲಿ ದಾಖಲೆಗಳನ್ನು ಸೃಷ್ಟಿಸಿ ಪರಭಾರೆ ಮಾಡಲು ಯತ್ನಿಸಲಾಗುತ್ತಿದೆ' ಎಂದು ಆರೋಪಿಸಿದ್ದರು.

`ಈ ಆರೋಪಗಳೆಲ್ಲ ಆಧಾರರಹಿತ' ಎಂದು ಸ್ಪಷ್ಟನೆ ನೀಡಿರುವ ಈರಪ್ಪ, `ಸರ್ವೆ ಸಂಖ್ಯೆ 109ರಲ್ಲಿ ಬಿಡಿಎ ವತಿಯಿಂದ ಯಾವುದೇ ಭೂಸ್ವಾಧೀನ ನಡೆದಿಲ್ಲ ಎಂಬುದಾಗಿ ರಾಜ್ಯಪತ್ರದಲ್ಲೇ ಪ್ರಕಟಿಸಲಾಗಿದೆ. ಸಿಟಿ ಇಂಪ್ರೂವ್‌ಮೆಂಟ್ ಟ್ರಸ್ಟ್ ಬೋರ್ಡ್ (ಸಿಐಟಿಬಿ) 1974ರ ಜೂನ್ 22ರಂದು ಬಾಪೂಜಿನಗರ- ಅತ್ತಿಗುಪ್ಪೆಯ ಎಕ್ಸ್‌ಟೆನ್ಷನ್ ಓನರ್ ಅಸೋಸಿಯೇಷನ್‌ಗೆ ಜಾಗ ಮಂಜೂರು ಮಾಡಿತ್ತು. ಈ ಜಾಗಕ್ಕೆ ಹಣ ಪಾವತಿಸಿ ನನ್ನ ಹೆಸರಿಗೆ ಖಾತೆ ವರ್ಗಾಯಿಸಿಕೊಂಡಿದ್ದೇನೆ' ಎಂದು ತಿಳಿಸಿದ್ದಾರೆ.

`ಯುಕೊ ಬ್ಯಾಂಕ್ ಇಂದಿರಾನಗರ ಶಾಖೆಯಲ್ಲಿ ನಕಲಿ ಪತ್ರವನ್ನು ಸ್ಪಷ್ಟಿಸಿದ್ದೇನೆ ಎಂಬ ಆರೋಪ ಸಹ ಸತ್ಯಕ್ಕೆ ದೂರವಾದುದು. ಬ್ಯಾಂಕ್‌ನಿಂದ ಸಾಲ ಪಡೆದಿರುವುದಕ್ಕೆ ದಾಖಲೆಗಳು ಇವೆ. ಬಿಬಿಎಂಪಿ ಹಾಗೂ ಅರಣ್ಯ ಇಲಾಖೆಯಿಂದ ಅನುಮತಿ ಪಡೆದೇ ಜಾಗದಲ್ಲಿ ಮರಗಳನ್ನು ಕಡಿಯಲಾಗಿದೆ. ತೇಜೋವಧೆ ಮಾಡುವ ಉದ್ದೇಶದಿಂದ ಆಧಾರರಹಿತ ಮಾಡಲಾಗಿದೆ' ಎಂದು ಅವರು ಹೇಳಿಕೆಯಲ್ಲಿ ಸಮಜಾಯಿಷಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.