ಬೆಂಗಳೂರು: ‘ರಾಜ್ಯದಲ್ಲಿ ಹದಗೆಟ್ಟಿರುವ ಆಡಳಿತ ಮತ್ತು ಭ್ರಷ್ಟ ವ್ಯವಸ್ಥೆಯ ವಿರುದ್ಧ ಇದೇ 6ರಿಂದ ಜನಾಂದೋಲನ ಆರಂಭಿಸುವುದಾಗಿ’ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹೇಳಿದರು.
ಭಾನುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ‘ಇದು ಪಕ್ಷಾತೀತವಾದ ಹೋರಾಟ. ಭ್ರಷ್ಟ ವ್ಯವಸ್ಥೆಯ ವಿರುದ್ಧ ಹೋರಾಡುವ ಇಚ್ಛೆ ಇರುವವರೆಲ್ಲ ಇದರಲ್ಲಿ ಭಾಗವಹಿಸಬಹುದು’ ಎಂದರು.
‘ರಾಜಕೀಯ ರಹಿತವಾಗಿ ನಡೆಯುವ ಈ ಹೋರಾಟದ ಅಂಗವಾಗಿ ಇದೇ 6ರಂದು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಿಂದ ಜನಾಂದೋಲನ ಜಾಥಾ ಹೊರಡಲಿದೆ. ಎಲ್ಲ ಜಾಥಾಗಳು ಮೇ 9ರಂದು ಶಿವಮೊಗ್ಗದಲ್ಲಿ ಸಮಾವೇಶಗೊಳ್ಳಲಿದ್ದು ಅಲ್ಲಿ ಬಹಿರಂಗ ಅಧಿವೇಶನ ಆಯೋಜಿಸಲಾಗಿದೆ’ ಎಂದು ತಿಳಿಸಿದರು.
‘ಸಾಹಿತಿಗಳು, ಬರಹಗಾರರು, ನಾಡಿನ ಸಾಕ್ಷಿಪ್ರಜ್ಞೆಯಂತೆ ಇರುವ ಕೆಲವರ ಜೊತೆ ದೂರವಾಣಿ ಮೂಲಕ ಈಗಾಗಲೇ ಮಾತನಾಡಿದ್ದೇನೆ. ಅವರೂ ಜಾಥಾಕ್ಕೆ ತಮ್ಮ ಬೆಂಬಲ ಸೂಚಿಸಿದ್ದಾರೆ’ ಎಂದರು.
ಈ ವಿಚಾರದ ಕುರಿತಾಗಿ ಜನಪರ ಸಂಘಟನೆಗಳೊಂದಿಗೆ ಇದೇ ಮಂಗಳವಾರ ಚರ್ಚಿಸುವುದಾಗಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.