ADVERTISEMENT

`ಭ್ರಷ್ಟ ಸರ್ಕಾರಗಳ ಉತ್ಪಾದನೆಯೇ ಕೆಪಿಎಸ್‌ಸಿ'

ಯುಪಿಎಸ್‌ಸಿ ಪರೀಕ್ಷೆಗಳತ್ತ ಗಮನಹರಿಸಿ: ಬಿದರಿ ಕರೆ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2013, 19:59 IST
Last Updated 3 ಸೆಪ್ಟೆಂಬರ್ 2013, 19:59 IST

ಬೆಂಗಳೂರು: `ಕರ್ನಾಟಕ ಲೋಕ ಸೇವಾ ಆಯೋಗ (ಕೆಪಿಎಸ್‌ಸಿ) ಹಗರಣಕ್ಕೆ ಸಂಬಂಧಿಸಿದಂತೆ ಹತ್ತು ವರ್ಷಗಳ ಹಳೆಯ ಪ್ರಕರಣವೇ ನ್ಯಾಯಾಲಯದಲ್ಲಿದ್ದರೂ ಏನೂ ಆಗಿಲ್ಲ. ಮುಂದೆಯೂ ಏನೂ ಆಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಹಣ ಮತ್ತು ಸಮಯವನ್ನು ವ್ಯರ್ಥ ಮಾಡುವ ಬದಲು, ಸ್ವಯಂ ಉದ್ಯೋಗ ಅಥವಾ `ಯುಪಿಎಸ್‌ಸಿ' ಪರೀಕ್ಷೆಗಳತ್ತ ಗಮನ ಹರಿಸಿ' ಎಂದು ಸಮಾಜವಾದಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಕರೆ ನೀಡಿದರು.

ಕರ್ನಾಟಕ ಪದವೀಧರರ ಯುವ ವೇದಿಕೆಯ ಎರಡನೇ ವಾರ್ಷಿಕೋತ್ಸವದ ಅಂಗವಾಗಿ ನಗರದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ `ಕೆಪಿಎಸ್‌ಸಿ ಹಗರಣಗಳು-ಯುವ ಪದವೀಧರರ ಸಮಸ್ಯೆಗಳು ಮತ್ತು ಪರಿಹಾರಗಳು' ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

`ನಮ್ಮ ನ್ಯಾಯಾಂಗ ವ್ಯವಸ್ಥೆ ಬಗ್ಗೆ ನನಗೆ ಗೌರವ ಇದೆ. ಆದರೆ ನ್ಯಾಯಕ್ಕಾಗಿ 10 ವರ್ಷಗಳಿಂದ ಕಾಯುತ್ತಿರುವ ಯುವಜನತೆ ತಮ್ಮಲ್ಲಿರುವ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಬಳಸಿಕೊಂಡು ಜೀವನದಲ್ಲಿ ಮುಂದುವರೆಯಬೇಕು. ರಾಜ್ಯದಲ್ಲಿ ಸಿಗುವ ಸರ್ಕಾರಿ ಸೇವೆಗಳ ಬೆನ್ನುಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಸ್ವಯಂ ಉದ್ಯೋಗವನ್ನು ಪ್ರಾರಂಭಿಸಿ ದೇಶಕ್ಕಾಗಿ ದುಡಿಯಿರಿ' ಎಂದು ಕರೆ ನೀಡಿದರು.

'ಭ್ರಷ್ಟ ಸರ್ಕಾರಗಳು ಮತ್ತು ಭ್ರಷ್ಟ ಪಕ್ಷಗಳ ಉತ್ಪಾದನೆಯೇ ಕೆಪಿಎಸ್‌ಸಿ. 1997 ರಿಂದ 2008ರ ವರೆಗೆ ನಡೆದ ಎ್ಲ್ಲಲ ಕೆಪಿಎಸ್‌ಸಿ ಸದಸ್ಯರ ನೇಮಕಾತಿಯ್ಲ್ಲಲಿ ಜಾತಿ ಹಾಗೂ ಹಣ ಕೆಲಸ ಮಾಡಿದೆ. ಈ ಹಿನ್ನೆಲೆಯಲ್ಲಿ ಕೆಪಿಎಸ್‌ಸಿಯಲ್ಲಿ ಮಾಡಿರುವ ತಪ್ಪುಗಳನ್ನು ಸರಿಪಡಿಸುವ ಶಕ್ತಿ ಸರ್ಕಾರಕ್ಕೆ ಇಲ್ಲ' ಎಂದು ಬಿದರಿ ಅವರು ಅಭಿಪ್ರಾಯಪಟ್ಟರು.

`ನಾನು ಪೊಲೀಸ್ ಮಹಾ ನಿರ್ದೇಶಕನಾಗಿದ್ದ ಸಮಯದಲ್ಲಿ ಕೆಪಿಎಸ್‌ಸಿಗೆ ಸಂಬಂಧಿಸಿದಂತೆ ನ್ಯಾಯವನ್ನು ಪಾಲಿಸಿದ್ದಕ್ಕೆ ನನ್ನ ಡಿಜಿ ಸ್ಥಾನವನ್ನು ಕಳೆದುಕೊಂಡೆ. ಈ ವಿಚಾರದಲ್ಲಿ  ನನಗೆ ಬೇಸರ ಇಲ್ಲ. ನ್ಯಾಯ ಮತ್ತು ಕಾನೂನನ್ನು ಎತ್ತಿ ಹಿಡಿದ ಸಂತೋಷ ನನಗಿದೆ' ಎಂದರು. 

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, `ಕೆಪಿಎಸ್‌ಸಿಯಲ್ಲಿ ಸಂಪ್ರದಾಯದಂತೆ ನಡೆದು ಬರುತ್ತಿದ್ದ ಭ್ರಷ್ಟಾಚಾರವನ್ನು ತೊಡೆದುಹಾಕಲು ಸರ್ಕಾರ ಮೊದಲ ಹೆಜ್ಜೆ ಇಟ್ಟಿದೆ. ಭ್ರಷ್ಟಾಚಾರ ಪ್ರಾರಂಭವಾಗುವ ಮೂಲವೇ ಕೆಪಿಎಸ್‌ಸಿ ಸದಸ್ಯರು. ಹೀಗಾಗಿಯೇ ಸದಸ್ಯರ ನೇಮಕಾತಿಯಲ್ಲಿ ಆಮೂಲಾಗ್ರ ಸುಧಾರಣೆಯಾಗಬೇಕಿದೆ. ಆಗ ಭ್ರಷ್ಟಾಚಾರವನ್ನು ತಡೆಯಬಹುದು.
ಇದರಿಂದ ರಾಜ್ಯದ ಆಡಳಿತದಲ್ಲೂ ಮಹತ್ತರವಾದ ಸುಧಾರಣೆಯಾಗುತ್ತದೆ' ಎಂದು ಅಭಿಪ್ರಾಯಪಟ್ಟರು.

`ಕೇವಲ ಕೆಪಿಎಸ್‌ಸಿ ಅಲ್ಲದೆ ಸರ್ಕಾರದ ಎಲ್ಲಾ ಇಲಾಖೆಗಳ ನೇಮಕಾತಿಗಳಲ್ಲಿಯೂ ಪಾರದರ್ಶಕತೆಯನ್ನು ಕಾಪಾಡಿಕೊಳ್ಳುವ ಅಗತ್ಯವಿದೆ' ಎಂದು ಹೇಳಿದರು.

ಉದ್ಘಾಟಿಸಿ ಮಾತನಾಡಿದ ಮಾಜಿ ಸಚಿವ ಪ್ರೊ.ಬಿ.ಕೆ.ಚಂದ್ರಶೇಖರ್, ಸ್ವಾಯತ್ತತೆಯ ಮುಖವಾಡ ಧರಿಸಿರುವ ಕೆಪಿಎಸ್‌ಸಿಯಲ್ಲಿ ಪ್ರಾರಂಭದಿಂದಲೂ ಭ್ರಷ್ಟಾಚಾರ ನಡೆಯುತ್ತಿದೆ. ಸದಸ್ಯರ ನೇಮಕಕ್ಕೆ ಯಾವುದೇ ಅರ್ಹತೆ ಇಲ್ಲ. ಇದರಿಂದಾಗಿ ಕೆಪಿಎಸ್‌ಸಿ ಎಂದೂ ತತ್ವ ಬದ್ಧವಾಗಿ ಕಾರ್ಯ ನಿರ್ವಹಿಸಿಲ್ಲ' ಎಂದು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.