ಬೆಂಗಳೂರು: ತನ್ನನ್ನು ಮದುವೆಯಾಗಲು ನಿರಾಕರಿಸಿದ ಕಾರಣಕ್ಕೆ ಕಾರು ಚಾಲಕನೊಬ್ಬ ವಿವಾಹಿತ ಮಹಿಳೆ ಮೇಲೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಿ ಕೆಂಪೇಗೌಡ ನಗರ ಪೊಲೀಸರ ಅತಿಥಿಯಾಗಿದ್ದಾನೆ.
ಪಾಂಡವಪುರದ ರಜನಿಕಾಂತ್ (32) ಎಂಬಾತನನ್ನು ಬಂಧಿಸಲಾಗಿದೆ. ಈತ ಪುಷ್ಪಾ (35) ಎಂಬುವರಿಗೆ ಬಿಯರ್ ಬಾಟಲಿಯಿಂದ ಹೊಡೆದು, ನಂತರ ಹೊಟ್ಟೆಗೆ ಎರಡು ಬಾರಿ ಇರಿದಿದ್ದ ಎಂದು ಪೊಲೀಸರು ಹೇಳಿದ್ದಾರೆ.
ವಿವಾಹಿತರಾದ ಪುಷ್ಪಾ, ಪತ್ನಿ–ಮಕ್ಕಳ ಜತೆ ಪಾಂಡವಪುರ
ದಲ್ಲಿ ನೆಲೆಸಿದ್ದರು. ಅವರನ್ನು ಪ್ರೀತಿ ಮಾಡುತ್ತಿದ್ದ ರಜನಿಕಾಂತ, ತನ್ನನ್ನು ಮದುವೆ ಆಗುವಂತೆ ದುಂಬಾಲು ಬಿದ್ದಿದ್ದ. ಈ ವಿಚಾರ ಪುಷ್ಪಾ ಪತಿಗೆ ಗೊತ್ತಾಗಿ, ಮನೆಯಲ್ಲಿ ಜೋರು ಗಲಾಟೆಯಾಗಿತ್ತು. ಆ ನಂತರ ಅವರು ಪತಿಯನ್ನು ತೊರೆದು, ಬೆಂಗಳೂರಿನ ಕೇಂಪೇಗೌಡ ನಗರದಲ್ಲಿರುವ ಅಕ್ಕನ ಮನೆಗೆ ಬಂದಿದ್ದರು.
ಪುಷ್ಪಾ ಏಕಾಏಕಿ ನಾಪತ್ತೆ
ಯಾಗಿದ್ದರಿಂದ ಅನುಮಾನಗೊಂಡ ಪತಿ, ರಜನಿಕಾಂತನೇ ಹೆಂಡತಿಯನ್ನು ಕರೆದುಕೊಂಡು ಹೋಗಿದ್ದಾನೆ ಎಂದು ಭಾವಿಸಿದ್ದರು. ಇದೇ ವಿಚಾರವಾಗಿ ಅಕ್ಕ–ಪಕ್ಕದ ಊರಿನವರೆಲ್ಲ ಒಟ್ಟಾಗಿ, ರಜನಿಕಾಂತನನ್ನು ವಿಚಾರಿಸಿದ್ದರು. ಆಗ ಆತ, ಪುಷ್ಪಾ ಬಗ್ಗೆ ತನಗೇನೂ ಗೊತ್ತಿಲ್ಲ ಎಂದಿದ್ದ. ಆದರೆ, ಗ್ರಾಮದವರು ಅವನ ಮಾತನ್ನು ನಂಬಿರಲಿಲ್ಲ.
ಇದರಿಂದ ಮುಜುಗರಕ್ಕೆ ಒಳಗಾದ ಆರೋಪಿ, ತಾನೇ ಪುಷ್ಪಾ ಅವರ ಹುಡುಕಾಟ ಪ್ರಾರಂಭಿಸಿದ್ದ. ಅವರು ಅಕ್ಕನ ಮನೆಯಲ್ಲಿರುವ ವಿಚಾರ ತಿಳಿದು ಸೋಮವಾರ ರಾತ್ರಿ 8 ಗಂಟೆ ಸುಮಾರಿಗೆ ಮನೆ ಹತ್ತಿರ ಬಂದಿದ್ದ. ತನ್ನನ್ನು ಮದುವೆ ಆಗುವಂತೆ ಅಲ್ಲಿಯೂ ಗಲಾಟೆ ಪ್ರಾರಂಭಿಸಿದ್ದ ರಜನಿಕಾಂತ್, ಒಪ್ಪದಿದ್ದಾಗ ಅಲ್ಲೇ ಬಿದ್ದಿದ್ದ ಬಾಟಲಿಯಿಂದ ಅವರ ತಲೆಗೆ ಹೊಡೆದಿದ್ದ. ನಂತರ ಹೊಟ್ಟೆಗೆ ಇರಿದು ಹೋಗಿದ್ದ.
ಕೂಡಲೇ ಗಾಯಾಳುವನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸ್ಥಳೀಯರು ನೀಡಿದ ಮಾಹಿತಿ ಆಧರಿಸಿ, ಮನೆ ಸಮೀಪದ ಬಿ.ಕೆ.ಕಾಲೊನಿಯಲ್ಲಿ ಆತನನ್ನು ವಶಕ್ಕೆ ಪಡೆಯಲಾಯಿತು ಎಂದು ಪೊಲೀಸರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.