ADVERTISEMENT

ಮನುಷ್ಯನ ಒಳಿತಿಗಾಗಿ ತಂತ್ರಜ್ಞಾನ ಬಳಕೆ: ಅತ್ರೆ

​ಪ್ರಜಾವಾಣಿ ವಾರ್ತೆ
Published 21 ಜುಲೈ 2013, 19:43 IST
Last Updated 21 ಜುಲೈ 2013, 19:43 IST

ಬೆಂಗಳೂರು: `ತಂತ್ರಜ್ಞಾನ ಮನುಷ್ಯದ ಒಳಿತಿಗಾಗಿ ಹಾಗೂ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಬಳಕೆಯಾಗಬೇಕು. ತಂತ್ರಜ್ಞಾನದ ಬಳಕೆಯಿಂದ ಕೆಡುಕು ಆಗಬಾರದು' ಎಂದು ರಕ್ಷಣಾ ಸಚಿವರ ಮಾಜಿ ವೈಜ್ಞಾನಿಕ ಸಲಹೆಗಾರ ಡಾ.ವಿ.ಕೆ. ಅತ್ರೆ ಆಶಿಸಿದರು.

ಬನಶಂಕರಿಯ ಬಿ.ಎನ್.ಎಂ. ತಾಂತ್ರಿಕ ಸಂಸ್ಥೆಯ ಆಶ್ರಯದಲ್ಲಿ ನಗರದಲ್ಲಿ ಇತ್ತೀಚೆಗೆ ನಡೆದ `ವಿಎಲ್‌ಎಸ್‌ಐ, ಸಂವಹನ, ಸುಧಾರಿತ ಸಾಧನಗಳು, ಸಂಕೇತಗಳು ಹಾಗೂ ವ್ಯವಸ್ಥೆಗಳು' ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಈಗ ಯಾವ ರಾಷ್ಟ್ರವೂ ತಂತ್ರಜ್ಞಾನವನ್ನು ನಿರಾಕರಿಸುವ ಸ್ಥಿತಿಯಲ್ಲಿ ಇಲ್ಲ. ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಅಪಾಯ ಇದ್ದೇ ಇದೆ. ತಂತ್ರಜ್ಞಾನದ ಬಳಕೆಯಿಂದ ಪರಿಸರ ಮಾಲಿನ್ಯದಂತಹ ಅನೇಕ ಸಮಸ್ಯೆಗಳು ಉದ್ಭವ ಆಗಿವೆ. ಇಂತಹ ಸಮಸ್ಯೆಗಳನ್ನು ನಿಯಂತ್ರಿಸಲು ತಂತ್ರಜ್ಞಾನದ ಬಳಕೆ ಸರಿಯಾಗಿ ಆಗಬೇಕು' ಎಂದು ಅವರು ಕಿವಿಮಾತು ಹೇಳಿದರು.

`ಇದು ತಂತ್ರಜ್ಞಾನದ ಯುಗ. ಸಂವಹನ, ಉದ್ಯಮ, ವಿತ್ತ ಸೇರಿದಂತೆ ಎಲ್ಲ ಕ್ಷೇತ್ರಗಳು ತಂತ್ರಜ್ಞಾನದ ಮೇಲೆ ಹೆಚ್ಚು ಅವಲಂಬಿತ ಆಗಿವೆ. ತಂತ್ರಜ್ಞಾನದಿಂದ ದೇಶಕ್ಕೆ ದೊಡ್ಡ ಪ್ರಮಾಣದ ಕೀರ್ತಿ ಹಾಗೂ ಆದಾಯ ದೊರಕುತ್ತಿದೆ. ತಾಂತ್ರಿಕ ಬಲಾಢ್ಯ ರಾಷ್ಟ್ರಗಳು ವಿಶ್ವದ ಶಕ್ತಿಗಳಾಗುತ್ತಿವೆ. ಈ ನಿಟ್ಟಿನಲ್ಲಿ ಯುವಜನರು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಂಶೋಧನೆಗಳನ್ನು ನಡೆಸಿ ದೇಶದ ಪ್ರಗತಿಗೆ ಕೊಡುಗೆ ನೀಡಬೇಕು' ಎಂದು ಅವರು ಸಲಹೆ ನೀಡಿದರು.

ಸಂಸ್ಥೆಯ ನಿರ್ದೇಶಕ ಪ್ರೊ.ಟಿ.ಜೆ. ರಾಮಮೂರ್ತಿ, `ಉಪನ್ಯಾಸಕರು ನಿರಂತರ ಅಧ್ಯಯನದಲ್ಲಿ ತೊಡಗಬೇಕು. ಈ ಮೂಲಕ ತಂತ್ರಜ್ಞಾನ ಕ್ಷೇತ್ರದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಮಾಹಿತಿ ಪಡೆದು ಅಧ್ಯಾಪನದ ಗುಣಮಟ್ಟವನ್ನು ಹೆಚ್ಚಿಸಬಹುದು' ಎಂದರು.

ಸಂಸ್ಥೆಯ ಅಧ್ಯಕ್ಷ ಪ್ರೊ.ಬಿ.ಸಿ. ರಾಜಣ್ಣ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ನಾರಾಯಣ ರಾವ್ ಆರ್. ಮಾನೆ, ಪ್ರಾಂಶುಪಾಲ ಡಾ.ಎಂ.ಎಸ್.ಸುರೇಶ್, ಸಮಾವೇಶದ ಸಂಯೋಜಕಿ ಡಾ.ವೀಣಾ ಎಸ್.ಚಕ್ರವರ್ತಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.