ADVERTISEMENT

ಮರಳು ಲಾರಿ ಮಾಲೀಕರ ಮುಷ್ಕರ ವಾಪಸ್

​ಪ್ರಜಾವಾಣಿ ವಾರ್ತೆ
Published 18 ಜುಲೈ 2013, 19:59 IST
Last Updated 18 ಜುಲೈ 2013, 19:59 IST

ಬೆಂಗಳೂರು: ಒಂದು ತಿಂಗಳೊಳಗೆ ನೂತನ ಮರಳು ನೀತಿ ಜಾರಿಗೆ ತರುವುದಾಗಿ ರಾಜ್ಯ ಸರ್ಕಾರ ಭರವಸೆ ನೀಡಿರುವುದರಿಂದ ಮರಳು ಲಾರಿ ಮಾಲೀಕರು ಗುರುವಾರ ಮುಷ್ಕರ ಹಿಂಪಡೆದಿದ್ದಾರೆ.

`ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಹಾಗೂ ಲೋಕೋಪಯೋಗಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ವಿಧಾನಸೌಧದಲ್ಲಿ ಮೂರು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಲಾಯಿತು. ನೂತನ ಮರಳು ನೀತಿಯನ್ನು ಜಾರಿಗೆ ತರುವ ಬಗ್ಗೆ ಸಾರಿಗೆ ಸಚಿವರು ಭರವಸೆ ನೀಡಿದ್ದಾರೆ. ಹೀಗಾಗಿ ಮುಷ್ಕರ ವಾಪಸ್ ಪಡೆಯಲಾಗಿದೆ.

ಶುಕ್ರವಾರದಿಂದ ಮರಳು ಲಾರಿಗಳು ಎಂದಿನಂತೆ ಸಂಚರಿಸಲಿವೆ' ಎಂದು ರಾಜ್ಯ ಲಾರಿ ಮಾಲೀಕರು ಮತ್ತು ಏಜೆಂಟರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ತಿಳಿಸಿದರು.

`ಮರಳು ಸಾಗಣೆ ಲಾರಿಗಳಿಗೆ ದಂಡ ವಿಧಿಸುವ ಬದಲು ಕಾನೂನು ಬದ್ಧವಾಗಿಯೇ ಮರಳು ಸಾಗಿಸಲು ಪರವಾನಗಿ ನೀಡಲು ಸಚಿವರು ಒಪ್ಪಿದ್ದಾರೆ. ಮರಳು ಸಾಗಣೆಯ ಪರವಾನಗಿ ಇಲ್ಲದ ಲಾರಿಗಳಿಗೆ ದಂಡದ ಮೊತ್ತವನ್ನು ್ಙ10 ಸಾವಿರಕ್ಕೆ ಮಿತಿಗೊಳಿಸುವ ಬಗ್ಗೆಯೂ ಸಚಿವರು ಭರವಸೆ ನೀಡಿದ್ದಾರೆ. ಮರಳು ಲಾರಿಗಳನ್ನು ಎಲ್ಲೆಂದರಲ್ಲಿ ತಡೆದು ಮನ ಬಂದಂತೆ ಮೊಕದ್ದಮೆ ದಾಖಲಿಸುವುದನ್ನು ನಿಲ್ಲಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ತಿಳಿಸಿದ್ದಾರೆ' ಎಂದರು.

ನೂತನ ಮರಳು ನೀತಿ ಜಾರಿಗೆ ತರಬೇಕೆಂದು ಒತ್ತಾಯಿಸಿ ಮರಳು ಲಾರಿ ಮಾಲೀಕರು ಜುಲೈ 7ರಿಂದ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.