ಬೆಂಗಳೂರು: ‘ಮಳೆಯಿಂದಾಗಿ ನಗರದಲ್ಲಿ ಉಂಟಾಗಿರುವ ಸಮಸ್ಯೆಗಳನ್ನು ನಿವಾರಿಸುವ ಮೂಲಕ ಜನರ ಮನಸ್ಸು ಗೆಲ್ಲಿ’ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಪಕ್ಷದ ನಗರ ಶಾಸಕರಿಗೆ ತಾಕೀತು ಮಾಡಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ, ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ಎಲ್ಲ ಸ್ಥಾನಗಳನ್ನು ಗೆಲ್ಲಬೇಕು’ ಎಂದು ಗುರಿ ನೀಡಿದ್ದಾರೆ.
‘ಶಾಸಕರು ನೇರವಾಗಿ ಜನರ ಬಳಿಗೆ ಹೋಗಿ ಸಮಸ್ಯೆ ಆಲಿಸಬೇಕು. ಬಿಜೆಪಿ ನಾಯಕರಿಗಿಂತಲೂ ಮೊದಲು ನೀವು ಜನರನ್ನು ತಲುಪಬೇಕು’ ಎಂದೂ ಸೂಚನೆ ನೀಡಿದ್ದಾರೆ.
‘ಬೆಂಗಳೂರು ನಗರದ ಸಮಸ್ಯೆಗಳನ್ನು ಎತ್ತಿ ಹಿಡಿದು ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡುತ್ತಿದ್ದಾರೆ. ಕೆಲವು ಸಚಿವರುಗಳ ಮೇಲೆ ಮಾಡಿದ್ದ ಆರೋಪಗಳು ನನ್ನ ಗಮನಕ್ಕೂ ಬಂದಿವೆ. ಈ ಆರೋಪಗಳಿಗೆ ಸ್ಪಷ್ಟೀಕರಣ ನೀಡಿ, ತಿರುಗೇಟು ನೀಡುವ ಕೆಲಸ ಮಾಡಬೇಕು’ ಎಂದು ಅವರು ಸಲಹೆ ನೀಡಿದರು.
‘ಬಿಜೆಪಿ ನಾಯಕರ ತಂತ್ರಗಳಿಗೆ ತಿರುಗೇಟು ನೀಡುವ ಕೆಲಸವನ್ನು ನೀವು ಮಾಡಬೇಕು. ಬೂತ್ ಮಟ್ಟದ ಕಮಿಟಿಗಳನ್ನು ಬಲಪಡಿಸಬೇಕು. ಪಕ್ಷ ಸಂಘಟಿಸುವ ಕೆಲಸ ಮಾಡಬೇಕು’ ಎಂದೂ ಸೂಚನೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.