ಬೆಂಗಳೂರು: ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ತಾರತಮ್ಯ ನಿವಾರಣೆಗಾಗಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಹಮ್ಮಿಕೊಂಡಿರುವ ಕಾಲ್ನಡಿಗೆ ಜಾಥಾ ಬೆಂಗಳೂರಿಗೆ ತಲುಪಿದೆ.
ಕ್ರಾಸ್ ಸಂಸ್ಥೆಯ ಸಂಸ್ಥಾಪಕಿ ಸೃಷ್ಟಿ ಭಕ್ಷಿ ಏಕಾಂಗಿಯಾಗಿ ಕಾಲ್ನಡಿಗೆ ಜಾಥಾ ನಡೆಸುತ್ತಿದ್ದಾರೆ. ಒಟ್ಟು 3,800 ಕಿಮೀ ದೂರವನ್ನು 260 ದಿನಗಳಲ್ಲಿ ಮುಟ್ಟುವ ಗುರಿಯೊಂದಿಗೆ ಜಾಥಾ ಪ್ರಾರಂಭಿಸಿದ್ದರು.
ಸೃಷ್ಟಿ ಮತ್ತು ಅವರ ತಂಡ ಎಲೆಕ್ಟ್ರಾನಿಕ್ ಸಿಟಿಯ ವೆಲಿಂಗ್ ಕರ್ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆಯಲ್ಲಿ ವಿದ್ಯಾರ್ಥಿ–ಶಿಕ್ಷಕರೊಂದಿಗೆ ಸಂವಾದ ನಡೆಸಿದರು.
‘ಅಬ್ ಸಮಜ್ ಹೋತಾ ನಹಿ’ ಎಂಬ ಶೀರ್ಷಿಕೆ ಅಡಿ ಕಾಲ್ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ. ಸಮಾನತೆ ಬಯಸುವ ಎಲ್ಲರೂ ಈ ಅಭಿಯಾನದಲ್ಲಿ ಕೈಜೋಡಿಸಬೇಕು’ ಎಂದು ಹೇಳಿದರು.
‘ಈಗಾಗಲೇ 24 ದಿನಗಳು ಕಳೆದಿವೆ. ನಿರ್ಜನ ಪ್ರದೇಶದಲ್ಲಿ ಸಂಗೀತ ಆಲಿಸುತ್ತೇನೆ. ಜನ ಸಿಕ್ಕಾಗ ಅವರೊಂದಿಗೆ ಮಾತನಾಡುತ್ತಾ ನಡಿಗೆ ಮುಂದುರಿಸುತ್ತಿದ್ದೇನೆ, ನನ್ನ ಗುರಿ ಬಹಳ ದೂರ ಮತ್ತು ಕಠಿಣವಾಗಿದ್ದರೂ ಸಾಧಿಸುವ ಛಲವಿದೆ’ ಎಂದರು.
ಸಂವಾದದಲ್ಲಿ ಭಾಗವಹಿಸಿದ್ದ ನಟಿ ಐಂದ್ರಿತಾ ರೇ, ‘ಚಿತ್ರರಂಗದಲ್ಲಿ ನಟಿಯರಿಗೆ ತಾರತಮ್ಯ ಮಾಡಲಾಗುತ್ತದೆ. ನಟರಿಗೆ ನೀಡುವ ಶೇ 5ರಷ್ಟು ಸಂಭಾವನೆಯನ್ನು ನಟಿಯರಿಗೆ ನೀಡುವುದಿಲ್ಲ. ಇದನ್ನು ಪ್ರಶ್ನಿಸಿದ್ದಕ್ಕೆ, ನನ್ನನ್ನು ಸ್ಯಾಂಡಲ್ವುಡ್ನಿಂದ ದೂರ ಇಡುವ ಪ್ರಯತ್ನ ನಡೆಯುತ್ತಿದೆ’ ಎಂದು ದೂರಿದರು.
ಟಿಆರ್ಎಸ್ಲಾ ಸಂಸ್ಥೆ ಮುಖ್ಯಸ್ಥೆ ತಾಲಿಶ್ ರಾಯ್, ‘ದೆಹಲಿ ಅತ್ಯಾಚಾರಿಗಳ ನಗರವಾಗಿ ಕುಖ್ಯಾತಿ ಗಳಿಸಿದೆ. ನಗರದಲ್ಲಿಯೂ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಮುಂದೊಂದು ದಿನ ನಗರವೂ ಆ ಹೆಸರು ಗಳಿಸಬಹುದು’ ಎಂದು ಬೇಸರ ವ್ಯಕ್ತಪಡಿಸಿದರು. ಐಟಿಸಿ ಸಂಸ್ಥೆ ಕಾಲ್ನಡಿಗೆ ಜಾಥಾದ ಪ್ರಾಯೋಜಕತ್ವ ವಹಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.