ADVERTISEMENT

ಮಾಜಿ ಲೋಕಾಯುಕ್ತ ಹೆಗ್ಡೆ ಅವರಿಗೆ ಕೋರ್ಟ್ ನೋಟಿಸ್

​ಪ್ರಜಾವಾಣಿ ವಾರ್ತೆ
Published 4 ಜನವರಿ 2012, 10:50 IST
Last Updated 4 ಜನವರಿ 2012, 10:50 IST

 ಬೆಂಗಳೂರು (ಐಎಎನ್ಎಸ್):  ಗುಪ್ತಚರ ವಿಭಾಗದ ಎಸ್ ಪಿ  ಹೇಮಂತ ನಿಂಬಾಳ್ಕರ್ ಅವರು ದಾಖಲಿಸಿದ್ದ ಮಾನಹಾನಿ ಪ್ರಕರಣದ ವಿಚಾರಣೆ ಆರಂಭಿಸಿರುವ ಕರ್ನಾಟಕ ಹೈಕೋರ್ಟ್, ನಿವೃತ್ತ ಲೋಕಾಯುಕ್ತ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರಿಗೆ ಬುಧವಾರ ನೋಟಿಸ್ ನೀಡಿದೆ.

ನಿಂಬಾಳ್ಕರ್ ಅವರು ಬೆಳಗಾವಿಯಲ್ಲಿ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾಗ 2009ರ ಮಾರ್ಚ್ ತಿಂಗಳಲ್ಲಿ ಲೋಕಾಯುಕ್ತ ಪೊಲೀಸರು ಅವರ ನಿವಾಸದ ಮೇಲೆ ದಾಳಿ ನಡೆಸಿದ್ದರು.

ನಿಂಬಾಳ್ಕರ್ ಅವರು ತಮ್ಮ ಘೋಷಿತ ಆದಾಯಕ್ಕಿಂತ ಅಪಾರ ಪ್ರಮಾಣದಲ್ಲಿ ಆಸ್ತಿಪಾಸ್ತಿ ಹೊಂದಿದ್ದಾರೆ ಎಂದು ಆಪಾದಿಸಲಾಗಿತ್ತು. ಲೋಕಾಯುಕ್ತ ಪೊಲೀಸರ ಕ್ರಮವನ್ನು ಸಮರ್ಥಿಸಿಕೊಂಡಿದ್ದ ಅಂದಿನ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು, ನಿಂಬಾಳ್ಕರ್ ಅವರು 250 ಕೋಟಿ ರೂಪಾಯಿಗಳಿಗೂ ಅಧಿಕ ಆಸ್ತಿ ಹೊಂದಿದ್ದಾರೆ ಎಂದು ಹೇಳಿದ್ದರು.

ADVERTISEMENT

~ಲೋಕಾಯುಕ್ತರ  ಹೇಳಿಕೆಯಿಂದ ತಮಗೆ ಮಾನಹಾನಿ ಆಗಿದೆ, ತಮ್ಮ ಹೆಸರಿಗೆ ಕಳಂಕ ಅಂಟಿಕೊಂಡಿದೆ~ ಎಂದು ದೂರಿ ನಿಂಬಾಳ್ಕರ್ ಅವರು 2011ರ ಮಾರ್ಚ್ ತಿಂಗಳಲ್ಲಿ ಹೈಕೋರ್ಟಿನಲ್ಲಿ ಮಾನಹಾನಿ ಪ್ರಕರಣ ದಾಖಲಿಸಿದ್ದರು. ~ದಾಳಿ ನಡೆದು ಎರಡು ವರ್ಷಗಳಾದರೂ ಲೋಕಾಯುಕ್ತ ಪೊಲೀಸರು ತಮ್ಮ ವಿರುದ್ಧ ಪ್ರಕರಣ ದಾಖಲಿಸಿಕೊಂಡಿಲ್ಲ. ಜೊತೆಗೆ ತಮ್ಮ ಅಪಾರ ಆಸ್ತಿಪಾಸ್ತಿ ಗಳಿಕೆಯನ್ನು ಸಮರ್ಥಿಸುವ ಯಾವ ಸಾಕ್ಷ್ಯಗಳನ್ನು ಒದಗಿಸಿಲ್ಲ~ ಎಂದು ನಿಂಬಾಳ್ಕರ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಇದಕ್ಕೂ ಮೊದಲು, ನಿಂಬಾಳ್ಕರ್ ಅವರು 2010ರ ಜೂನ್ 28 ರಂದು ಕೆಳ ನ್ಯಾಯಾಲಯದಲ್ಲಿ ಮಾನಹಾನಿ ಪ್ರಕರಣ ದಾಖಲಿಸಿದ್ದರು. ಆಗ ಆ ನ್ಯಾಯಾಲಯವು, ಲೋಕಾಯುಕ್ತ ಪೊಲೀಸರು ಇನ್ನೂ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂಬ ಕಾರಣ ನೀಡಿ ಪ್ರಕರಣವನ್ನು ವಜಾಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.