ADVERTISEMENT

ಮೂಢನಂಬಿಕೆಗಳ ವಿರುದ್ಧ ಅರಿವು ಅಗತ್ಯ

​ಪ್ರಜಾವಾಣಿ ವಾರ್ತೆ
Published 22 ಜನವರಿ 2012, 19:30 IST
Last Updated 22 ಜನವರಿ 2012, 19:30 IST

ಬೆಂಗಳೂರು:  `ಅಸಮಾನತೆ ಹಾಗೂ ಮೂಢನಂಬಿಕೆಗಳ ವಿರುದ್ಧ ಒಂದೆಡೆ ಹೋರಾಟ ನಡೆಯುತ್ತಿದ್ದರೆ, ಇನ್ನೊಂದೆಡೆ ಅದನ್ನು ಉಳಿಸಿಕೊಂಡು ಅನುಸರಿಸುವಂತೆ ಸಮಾಜಘಾತುಕ ಶಕ್ತಿಗಳು ಪ್ರೇರೇಪಿಸುತ್ತಿವೆ. ಈ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿಸಬೇಕು~ ಎಂದು ಸಾಹಿತಿ ಬಿ.ಟಿ.ಲಲಿತಾನಾಯಕ್ ಹೇಳಿದರು.

ಪದ್ಮನಾಭನಗರ ವನಿತಾ ಸಮಾಜವು ಪದ್ಮನಾಭ ನಗರದ ಸಹಕಾರಿ ತರಬೇತಿ ಸಂಸ್ಥೆಯ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ್ದ 30ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
`ಮಹಿಳೆಯರು ಮೂಢನಂಬಿಕೆಯನ್ನು ಹೆಚ್ಚಾಗಿ ಪಾಲಿಸುತ್ತಾರೆ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಅರಿವಿರುವುದಿಲ್ಲ ಎಂಬ ಆರೋಪವಿದೆ. ಇದರಿಂದ ಮುಕ್ತಗೊಳ್ಳುವ ನಿಟ್ಟಿನಲ್ಲಿ ಮಹಿಳಾ ಪರ ಸಂಘಟನೆಗಳು ಕಾರ್ಯನಿರ್ವಹಿಸಬೇಕು~ ಎಂದರು.

`ರಾಜ್ಯದಲ್ಲಿ 18 ಲಕ್ಷ ಮಂದಿ ವೇಶ್ಯೆಯರಿದ್ದಾರೆ ಎಂಬ ಅಘಾತಕಾರಿ ಅಂಶವನ್ನು ಸಮೀಕ್ಷೆಯೊಂದು ಬಹಿರಂಗಪಡಿಸಿದ್ದು, ಇದು ನಾಗರಿಕ ಸಮಾಜ ತಲೆ ತಗ್ಗಿಸುವಂತಹ ಸಂಗತಿಯಾಗಿದೆ. ಈ ಸಮಸ್ಯೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ ಮಹಿಳಾಪರ ಸಂಘಟನೆಗಳು ಗಂಭೀರ ಚಿಂತನೆ ನಡೆಸಬೇಕು~ ಎಂದು ಹೇಳಿದರು.

`ದೇಶಗಳಲ್ಲಿ ಸುಮಾರು 24 ಲಕ್ಷ ದೇವಾಲಯಗಳಿದ್ದು, ಈ ಪೈಕಿ ಶೇ 74ರಷ್ಟು ಅಕ್ರಮ ದೇವಾಲಯಗಳೇ ತಲೆಯೆತ್ತಿವೆ. ಪುರೋಹಿತಶಾಹಿ ವರ್ಗವು ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ನಡೆಸುತ್ತಿರುವ ದಬ್ಬಾಳಿಕೆ ಯನ್ನು ವಿರೋಧಿಸಿ, ಜನತೆ ಆದರ್ಶ ತತ್ವಗಳನ್ನು ಆಳವಡಿಸಿಕೊಳ್ಳಬೇಕಿದೆ~ ಎಂದರು.

ಸಚಿವ ಆರ್.ಅಶೋಕ ಮಾತನಾಡಿ, `ದೇಶದಲ್ಲಿ ಅವ್ಯಾಹತವಾಗಿ ಸಂಘ- ಸಂಸ್ಥೆಗಳು ಸ್ಥಾಪನೆಯಾಗುತ್ತಿವೆ. ಆದರೆ, ಸ್ಥಾಪನೆಯ ಉದ್ದೇಶಕ್ಕೆ ಬದ್ದವಾಗಿ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿ ಕೊಳ್ಳುತ್ತಿರುವ ಸಂಘಟನೆಗಳು ವಿರಳವಾಗಿದ್ದು, ಈ ಪೈಕಿ ವನಿತಾ ಸಂಘಟನೆಯು ಒಂದು~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
  
`ಸುಶಿಕ್ಷಿತ ಮಹಿಳೆ ಯರು ಈ ಮೊದಲು ವೈದ್ಯ ಮತ್ತು ಶಿಕ್ಷಕ ವೃತ್ತಿಯನ್ನೆ ಹೆಚ್ಚಾಗಿ ನೆಚ್ಚಿ ಕೊಂಡಿದ್ದರು. ಆದರೆ, ಪ್ರಸ್ತುತ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸುತ್ತಿರುವುದು ಪ್ರಶಂಸನೀಯ. ಮಹಿಳೆ ಯರಿಗೆ ಎಲ್ಲ ರಂಗಗಳಲ್ಲಿಯೂ ಹೆಚ್ಚಿನ ಅವಕಾಶ ದೊರೆಯುವ ಸ್ಥಿತಿ ನಿರ್ಮಾಣವಾಗಬೇಕು~ ಎಂದರು.

ಲಕ್ಷ್ಮಿನಾರಾಯಣರಾವ್ (ಸಮಾಜ ಸೇವೆ), ಪ್ರೊ.ಬಿ.ಲಲಿತಾಂಬ (ಸಾಹಿತ್ಯ), ರೇಣುಕಾ ವಿಶ್ವನಾಥ್ (ವೇದ ಉಪನಿಷತ್ತು) ಹಾಗೂ ಮೋಹನ್ ಕುಮಾರ್ (ಜನಪದ) ಅವರನ್ನು ಸನ್ಮಾನಿಸಲಾಯಿತು. ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ, ಪದ್ಮನಾಭನಗರ ಬಿಜೆಪಿ ಘಟಕದ ಅಧ್ಯಕ್ಷ ಶಶಿಕುಮಾರ್ ಇತರರು ಉಪಸ್ಥಿತರಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.