ADVERTISEMENT

ಮೆಟ್ರೊ: ಮೇರೆ ಮೀರಿದ ಉತ್ಸಾಹ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2014, 19:42 IST
Last Updated 1 ಮಾರ್ಚ್ 2014, 19:42 IST

ಬೆಂಗಳೂರು: ಸಂಪಿಗೆ ರಸ್ತೆಯಿಂದ ಪೀಣ್ಯವರೆಗೆ ಶನಿವಾರದಿಂದ ಸಾರ್ವಜನಿಕ ಸೇವೆಗೆ ಮುಕ್ತವಾಗಿರುವ ‘ನಮ್ಮ ಮೆಟ್ರೊ’ ರೈಲು ಸಂಚಾರಕ್ಕೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

‘ಪ್ರಯಾಣ ಆರಂಭಿಸಿದ ಮೊದಲ ದಿನವೇ ಬೆಳಿಗ್ಗೆ­ಯಿಂದ ಜನರು ಸಾಕಷ್ಟು ಸಂಖ್ಯೆಯಲ್ಲಿ ಮೆಟ್ರೊದಲ್ಲಿ ಪ್ರಯಾಣಿಸಲು ಬರುತ್ತಿದ್ದರು. ಸಂಜೆ 5 ಗಂಟೆಯವರೆಗೆ 25 ಸಾವಿರ ಮಂದಿ ಪ್ರಯಾಣಿಸಿದ್ದಾರೆ’ ಎಂದು ಬಿಎಂ­ಆರ್‌ಸಿಎಲ್‌ ಅಧಿಕಾರಿಗಳು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೆಟ್ರೊ ರೈಲಿನ ಒಳಗೆ ಸ್ವಚ್ಛತೆ ಕಾಪಾಡಲು ಮತ್ತು ನೆಲ ಹಾಳಾಗುವುದನ್ನು ತಡೆಯಲು ಒಬ್ಬ ಪ್ರಯಾ­ಣಿಕರು 15 ಕೆ.ಜಿ ವರೆಗೆ ಮಾತ್ರ ವಸ್ತುಗಳನ್ನು ತೆಗೆದು­ಕೊಂಡು ಹೋಗಲು ಮಿತಿ ನಿಗದಿಪಡಿಸಲಾಗಿದೆ. ಇದಕ್ಕಿಂತ ಹೆಚ್ಚು ಭಾರದ ವಸ್ತುಗಳನ್ನು ಮೆಟ್ರೊದಲ್ಲಿ ಸಾಗಿಸಿದರೆ ಉಳಿದ  ಪ್ರಯಾಣಿಕರಿಗೆ ತೊಂದರೆ ಆಗುವುದರಿಂದ ಈ ಮಿತಿ ನಿಗದಿಗೊಳಿಸಲಾಗಿದೆ ತಿಳಿಸಿದರು.

ಕುಟುಂಬ ಸಮೇತರಾಗಿ ಮೆಟ್ರೊ ಪ್ರಯಾಣದ ಮಜಾ ಅನುಭವಿಸಲು ಜನರು ಪೀಣ್ಯವರೆಗೆ ಹೋಗಿ ವಾಪಸ್ಸು ಬರುತ್ತಿದ್ದರು. ಆಸನಗಳು ಭರ್ತಿಯಾಗಿದ್ದರೂ  ಜನರು ನಿಂತುಕೊಂಡೇ ಪ್ರಯಾಣಿಸುತ್ತಿದ್ದುದು ಜನರ ಉತ್ಸಾಹವನ್ನು ತೋರಿಸುತ್ತಿತ್ತು.ಮಕ್ಕಳು ಮೆಟ್ರೊ ರೈಲಿನಿಂದ ನಗರವನ್ನು ನೋಡಿ ಖುಷಿ ಪಡುತ್ತಿದ್ದರು. ಮಳೆ­ಬರುತ್ತಿದ್ದುದನ್ನು ಲೆಕ್ಕಿಸದೆ ಪ್ರಯಾಣಿಕರು ಮೆಟ್ರೊ­ದತ್ತ ಧಾವಿಸುತ್ತಿದ್ದರು. ನಿಲ್ದಾಣ­ಗಳಲ್ಲಿ  ಮೇಲ್ಚಾ­ವಣಿ ನಿರ್ಮಾಣ ಕಾಮ­­ಗಾರಿ ಅಪೂರ್ಣ­ವಾಗಿದೆ. ಸಂಜೆ ಮಳೆ ಬಂದಿ­ದ್ದ­ರಿಂದ ನೀರು ಸೋರಿ ಪ್ರಯಾಣಿಕರು ಪರದಾಡುತ್ತಿರುವುದು ಕಂಡು ಬಂತು.

ಪ್ರಯಾಣಿಕರ ಪ್ರತಿಕ್ರಿಯೆಗಳು

ಭಾರದ ಮಿತಿ ಹೆಚ್ಚಿಸಿ
ಈ ಭಾಗದಲ್ಲಿ ಮೆಟ್ರೊ ಸೇವೆ ಆರಂಭವಾಗಿರುವುದು ಸಾರ್ವ­­ಜನಿಕರಿಗೆ ಹೆಚ್ಚು ಅನು­ಕೂಲ­­ವಾಗಿದೆ. ರೈಲಿನಲ್ಲಿ 15 ಕೆ.ಜಿ.­ವರೆಗೆ ಮಾತ್ರ ವಸ್ತುಗಳನ್ನು ತೆಗೆದು­ಕೊಂಡು ಹೋಗಲು ಮಿತಿ ನಿಗದಿ­ಪಡಿಸಲಾಗಿದೆ. ಪ್ರಯಾಣಿಕರು ಇತರ ಸ್ಥಳಗಳಿಗೆ ತೆರಳು­­ವಾಗ, ಮಾರುಕಟ್ಟೆಗೆ ಹೋಗುವಾಗ ಹೆಚ್ಚು ಭಾರ ಇರುವ ವಸ್ತುಗಳನ್ನು ತೆಗೆದುಕೊಂಡು ಹೋಗ­ಬೇಕಾ­ಗುತ್ತದೆ. ಆದ್ದರಿಂದ ಮಿತಿಯನ್ನು ಹೆಚ್ಚಿಸಬೇಕು.
–ಶ್ರೀಕಾಂತ್‌ ಎಂಜಿನಿಯರ್‌, ಬಸವೇಶ್ವರನಗರ

ಟ್ರಾಫಿಕ್‌ ಕಿರಿಕಿರಿ ಇರುವುದಿಲ್ಲ
ಮೆಟ್ರೊ ಸೇವೆ ಆರಂಭ ಆಗಿ­ರು­­ವುದು ವಾಹನ ದಟ್ಟಣೆ ಇಲ್ಲದೆ ಬೇಗ ತಲುಪ­ಬಹುದು. ಕಾಲೇ­ಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಅನು­­ಕೂಲ­­ವಾಗು­­ತ್ತದೆ.  ಮಾಲಿನ್ಯವೂ ಇರು­ವುದಿಲ್ಲ.
–ಐಶ್ವರ್ಯ ಎಂಜಿನಿಯರಿಂಗ್‌ ವಿದ್ಯಾರ್ಥಿನಿ, ಮಹಾಲಕ್ಷ್ಮಿ ಲೇಔಟ್‌

ADVERTISEMENT

ಸಮಯ ಉಳಿತಾಯ
ಪೀಣ್ಯದಿಂದ ಸಂಪಿಗೆ ರಸ್ತೆಗೆ 19 ನಿಮಿಷದಲ್ಲಿ ಬಂದಿ­ದ್ದೇವೆ. ಮಹಾಲಕ್ಷ್ಮಿ ಲೇ­ಔಟ್‌, ರಾಜಾಜಿ­ನಗರದಲ್ಲಿ ಸಂಬಂ­ಧಿಕ­ರಿದ್ದಾರೆ. ಈ ಎಲ್ಲ ಕಡೆಗೂ ಸುಲಭವಾಗಿ ಸಂಚ­ರಿಸ­­ಬಹುದಾಗಿದೆ.
–ಆರತಿ ಸಂತೋಷ್‌ ಗೃಹಿಣಿ, ಲಗ್ಗೆರೆ

ಕಾಮಗಾರಿ ಪೂರ್ಣಗೊಳ್ಳಬೇಕು
ನಗರದ ಇನ್ನೂ ಹಲವು ಭಾಗ­ಗಳಲ್ಲಿ ಮೆಟ್ರೊ ಕಾಮ­ಗಾರಿ ಪ್ರಗತಿಯಲ್ಲಿದೆ. ಎಲ್ಲ ಕಡೆಗೂ ಕಾಮಗಾರಿ ಪೂರ್ಣ­ಗೊಂಡರೆ ಜನರಿಗೆ ಹೆಚ್ಚು ಅನು­ಕೂಲ­ವಾಗುತ್ತದೆ. ಈ ಸೇವೆ­ಯಿಂದಾಗಿ ಹೆಚ್ಚು ಸಮಯ ಉಳಿ­ತಾಯವಾಗುತ್ತದೆ.
–ನಂದಿನಿ ಸಾಫ್ಟ್‌ವೇರ್‌ ಎಂಜಿನಿಯರ್‌, ಯಲಹಂಕ

ಹುಬ್ಬಳ್ಳಿಯಿಂದ ಬಂದೆ
ಎಂ.ಜಿ.ರಸ್ತೆಯಲ್ಲಿ ಮೆಟ್ರೊ ಸೇವೆ ಆರಂಭವಾದಾಗ ಬರಲು ಸಾಧ್ಯವಾಗಿರಲಿಲ್ಲ. ವಿದೇಶ­ದಲ್ಲಿ ಇಂತಹ ಸೇವೆ ಇರು­ವು­ದನ್ನು ನೋಡಿದ್ದೇವೆ. ಈ ಸೇವೆ ಸಿಗು­­ತ್ತಿರುವುದು ಖುಷಿ ತಂದಿದೆ. ಹುಬ್ಬಳ್ಳಿಯಿಂದ ಮೆಟ್ರೊ ನೋಡಲು ಬಂದಿದ್ದೇನೆ.
–ಕೃಷ್ಣ ಖಾಸಗಿ ಉದ್ಯೋಗಿ.

ಸುಲಭವಾಗಿ ತಲುಪಬಹುದು
ನಗರದಲ್ಲಿ ಮೊದಲು ಮೆಟ್ರೊ ಸೇವೆ ಆರಂಭವಾದಾಗ ಪ್ರಯಾಣಿಸಿದ್ದೆ. ಈ ಸೇವೆಯಿಂದಾಗಿ ನಗರದ ವಿವಿಧ ಸ್ಥಳಗಳಿಗೆ ಬೇಗ ತಲುಪಬಹುದಾಗಿದೆ. ಮೆಟ್ರೊ ಪ್ರಯಾಣ ದರವನ್ನು ಇನ್ನಷ್ಟು ಕಡಿಮೆ ಮಾಡಿದರೆ ಹೆಚ್ಚು ಅನುಕೂಲವಾಗುತ್ತದೆ
–ಶ್ರೀನಿವಾಸ್‌ ಉಪನ್ಯಾಸಕ, ಬಸವೇಶ್ವರನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.