ADVERTISEMENT

ಮೇಲ್ವಿಚಾರಕ ಸಿಬ್ಬಂದಿಗೆ ನಿಗಮ ಎಚ್ಚರಿಕೆ

‘ನಮ್ಮ ಮೆಟ್ರೊ’: ಮುಷ್ಕರಕ್ಕೆ ಕಾರ್ಮಿಕರಿಗೆ ಪ್ರೇರೇಪಣೆ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2018, 19:39 IST
Last Updated 12 ಮಾರ್ಚ್ 2018, 19:39 IST

ಬೆಂಗಳೂರು: ಕಾರ್ಮಿಕರನ್ನು ಮುಷ್ಕರಕ್ಕೆ ಪ್ರೇರೇಪಿಸುತ್ತಿದ್ದ ಕಾರ್ಯಾಚರಣೆ ಮತ್ತು ನಿರ್ವಹಣೆ (ಒ ಆ್ಯಂಡ್‌ ಎಂ) ವಿಭಾಗದ ಮೇಲ್ವಿಚಾರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಬೆಂಗಳೂರು ಮೆಟ್ರೊ ರೈಲು ನಿಗಮ ಎಚ್ಚರಿಕೆ ನೀಡಿದೆ.

ಬೈಯಪ್ಪನಹಳ್ಳಿಯಲ್ಲಿರುವ ಒ ಆ್ಯಂಡ್‌ ಎಂ ವಿಭಾಗದ ಕಚೇರಿಯ ಸೂಚನಾ ಫಲಕದಲ್ಲಿ ಸೋಮವಾರ ಈ ಕುರಿತ ಅಧಿಕೃತ ಜ್ಞಾಪನಾಪತ್ರವನ್ನು ಪ್ರದರ್ಶಿಸಲಾಗಿದೆ.

ಕಾರ್ಮಿಕ ಸಂಘಟನೆಯ ಚಟುವಟಿಕೆಯಲ್ಲಿ ಕೆಲವು ಮೇಲ್ವಿಚಾರಕರು ತೊಡಗಿಕೊಂಡಿರುವುದು ಗಮನಕ್ಕೆ ಬಂದಿದೆ. 2017ರ ಸೆ 7ರಂದು ನಿಗಮವು ಹೊರಡಿಸಿರುವ ಸುತ್ತೋಲೆ ಪ್ರಕಾರ ಸೆಕ್ಷನ್‌ ಎಂಜಿನಿಯರ್‌ಗಳು, ನಿಲ್ದಾಣಗಳ ಅಧೀಕ್ಷಕರು, ನಿಲ್ದಾಣ ನಿಯಂತ್ರಕರು, ರೈಲು ಚಾಲಕರು, ಸಿಬ್ಬಂದಿ ನಿಯಂತ್ರಕರು, ಸಿಗ್ನಲಿಂಗ್‌ ವಿಭಾಗದ ಜೂನಿಯರ್‌ ಎಂಜಿನಿಯರ್‌ಗಳು ಗ್ರಾಹಕ ಸಂಪರ್ಕಾಧಿಕಾಧಿಕಾರಿಗಳು, ಮೇಲ್ವಿಚಾರಕ ದರ್ಜೆಯಲ್ಲಿ ಬರುತ್ತಾರೆ. ಅವರು ಯಾವುದೇ ಕಾರ್ಮಿಕ ಸಂಘಟನೆಗಳ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ಇಲ್ಲ ಎಂದು ಈ ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.

ADVERTISEMENT

ಈ ಎಚ್ಚರಿಕೆಯ ಬಳಿಕವೂ ಇಂತಹ ಚಟುವಟಿಕೆ ಮುಂದುವರಿಸಿದರೆ ಮೆಟ್ರೊ ರೈಲ್ವೆ ಸಾಮಾನ್ಯ ನಿಯಮಗಳ ಅನ್ವಯ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಒ ಆ್ಯಂಡ್ ಎಂ ವಿಭಾಗದ ಸಹಾಯಕ ಪ್ರಧಾನ ವ್ಯವಸ್ಥಾಪಕರು ಸೂಚಿಸಿದ್ದಾರೆ.

ಹುದ್ದೆ ಅಥವಾ ಸಂಬಳದ ಆಧಾರದಲ್ಲಿ ಅಧಿಕಾರಿಯು ಕಾರ್ಮಿಕ ಹೌದೋ ಅಲ್ಲವೋ ಎಂದು ನಿರ್ಧರಿಸಲು ಬರುವುದಿಲ್ಲ ಎಂದು ಕಾರ್ಮಿಕ ನ್ಯಾಯಾಲಯ ಸ್ಪಷ್ಟಪಡಿಸಿದೆ. ಈ ಸೂಚನೆಗೆ ನಾವು ಹೆದರುವುದಿಲ್ಲ ಎಂದು ಬಿಎಂಆರ್‌ಸಿಎಲ್‌ ನೌಕರರ ಸಂಘಟನೆಯ ಕಾರ್ಯದರ್ಶಿ ಉದಯ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.