ಬೆಂಗಳೂರು: `ಮೈಸೂರಿನಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರ ತೆರೆಯುವ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ' ಎಂದು ಹೊಸ ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿ ಪಿ.ಎಸ್.ಕಾರ್ತಿಕೇಯನ್ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ಮೈಸೂರಿನಲ್ಲಿ ಪಾಸ್ಪೋರ್ಟ್ ಸೇವಾ ಕೇಂದ್ರ ತೆರೆಯಲು ಬೇಡಿಕೆ ಹೆಚ್ಚಾಗಿದೆ. ಈ ಬಗ್ಗೆ ಈಗಾಗಲೇ ಪ್ರಸ್ತಾವ ಸಲ್ಲಿಸಲಾಗಿದ್ದು, ಇಲಾಖೆಯ ಹಿರಿಯ ಅಧಿಕಾರಿಗಳು ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ' ಎಂದು ತಿಳಿಸಿದರು.
`ಗುಲ್ಬರ್ಗದಲ್ಲಿನ ಪಾಸ್ಪೋರ್ಟ್ ಅರ್ಜಿ ಸಲ್ಲಿಕೆ ಕೇಂದ್ರವನ್ನು ಪಾಸ್ಪೋರ್ಟ್ ಸೇವಾ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಬೇಕೆಂಬ ಬೇಡಿಕೆ ಕುರಿತು ಪರಿಶೀಲನೆ ನಡೆಸಲಾಗಿದೆ' ಎಂದರು.
`ಪಾಸ್ಪೋರ್ಟ್ ಅರ್ಜಿ ಸಲ್ಲಿಸಲು ಸಮಯ ನಿಗದಿಪಡಿಸಿಕೊಳ್ಳುವ ಅವಧಿ ಹೆಚ್ಚಿಸಲಾಗಿದೆ. ಸಾಮಾನ್ಯ ಪಾಸ್ಪೋರ್ಟ್ಗೆ 21 ದಿನ ಮತ್ತು ಆರೋಗ್ಯ ಹಾಗೂ ವಿದ್ಯಾಭ್ಯಾಸ ಉದ್ದೇಶದ ಪಾಸ್ಪೋರ್ಟ್ಗೆ 7 ದಿನಗಳ ಮುಂಚಿತವಾಗಿ ಸಮಯಾವಕಾಶ ಗೊತ್ತುಮಾಡಿಕೊಳ್ಳಬಹುದು. ಇದರ ಸಾಧಕ ಬಾಧಕಗಳ ಬಗ್ಗೆ ಸಮಗ್ರ ಮೌಲ್ಯಮಾಪನ ಮಾಡಿದ ನಂತರ ಈ ವ್ಯವಸ್ಥೆಯನ್ನು ಮುಂದುವರಿಸುವ ಬಗ್ಗೆ ಚಿಂತನೆ ನಡೆಸಲಾಗುವುದು' ಎಂದರು.
`ಬೆಂಗಳೂರು ವಿಭಾಗದಲ್ಲಿ ಕಳೆದ ಒಂದು ವರ್ಷದಲ್ಲಿ 4 ಲಕ್ಷ ಪಾಸ್ಪೋರ್ಟ್ಗಳನ್ನು ವಿತರಿಸಲಾಗಿದೆ. ಈ ಮೂಲಕ ಪಾಸ್ಪೋರ್ಟ್ ವಿತರಣೆಯಲ್ಲಿ ದೇಶದಲ್ಲೇ ಎರಡನೆ ಸ್ಥಾನದಲ್ಲಿದ್ದೇವೆ. 5 ಲಕ್ಷ ಪಾಸ್ಪೋರ್ಟ್ ವಿತರಣೆ ಮಾಡುವ ಮೂಲಕ ಹೈದರಾಬಾದ್ ಮೊದಲ ಸ್ಥಾನದಲ್ಲಿದೆ' ಎಂದು ಅವರು ಹೇಳಿದರು.
`ಇದೇ 8ರಂದು ನಡೆಯುವ ಪಾಸ್ಪೋರ್ಟ್ ಮೇಳಕ್ಕೆ ಎಲ್ಲ ರೀತಿಯ ಸಿದ್ಧತೆ ನಡೆಸಿಕೊಳ್ಳಲಾಗಿದೆ. ಈಗಾಗಲೇ ಪೂರ್ವಾನುಮತಿ ಪಡೆದಿರುವವರು ಅಂದು ನಗರದ ಲಾಲ್ಬಾಗ್, ಮಾರತ್ತಹಳ್ಳಿ ಹೊರವರ್ತುಲ ರಸ್ತೆ ಹಾಗೂ ಹುಬ್ಬಳ್ಳಿ ಮತ್ತು ಮಂಗಳೂರಿನಲ್ಲಿರುವ ಪಾಸ್ಪೋರ್ಟ್ ಸೇವಾಕೇಂದ್ರಗಳಲ್ಲಿ ದಾಖಲೆಗಳನ್ನು ಸಲ್ಲಿಸಬಹುದು. ದಾಖಲೆಗಳನ್ನು ತ್ವರಿತವಾಗಿ ಪರಿಶೀಲನೆ ನಡೆಸಿ, ಪಾಸ್ಪೋರ್ಟ್ ನೀಡುವ ಪ್ರಕ್ರಿಯೆಯನ್ನು ವೇಗಗೊಳಿಸಲು ಈ ಮೇಳ ಆಯೋಜಿಸಲಾಗಿದೆ' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.