ಹೊಸಕೋಟೆ: ತಾಲ್ಲೂಕಿನ ಭೀಮಕ್ಕನಹಳ್ಳಿಯಲ್ಲಿ ವಧುವಿಗೆ ಮೊಗ್ಗಿನ ಜಡೆ ಕೊಡಲಿಲ್ಲ ಎಂಬ ಕಾರಣಕ್ಕೆ ವಧು ಹಾಗೂ ವರನ ಸಂಬಂಧಿಕರ ನಡುವೆ ಜಗಳವಾಗಿ, ಮದುವೆಯೇ ರದ್ದಾಗಿದೆ.
‘ವಿಜಯಪುರದ ವಧು ಹಾಗೂ ಭೀಮಾಪುರ ಗ್ರಾಮದ ವರನ ಜತೆ ಮದುವೆ ನಿಶ್ಚಯವಾಗಿತ್ತು. ಬುಧವಾರ ಸಂಜೆ ಮದುವೆಯ ಆರತಕ್ಷತೆ ನಡೆದಿತ್ತು. ಗುರುವಾರ ಬೆಳಿಗ್ಗೆ ಕಲ್ಯಾಣಮಂಟಪದಲ್ಲಿ ಮದುವೆ ನಡೆಯಬೇಕಿತ್ತು. ಅಲ್ಲಿ ಜಡೆಗಾಗಿ ಜಗಳ ನಡೆದಿದ್ದರಿಂದ, ವಧುವಿನ ಕಡೆಯವರೇ ಮಂಟಪದಿಂದ ಹೊರಟು ಹೋದರು’ ಎಂದು ಸಂಬಂಧಿಯೊಬ್ಬರು ತಿಳಿಸಿದರು.
‘ಸಂಪ್ರದಾಯದ ಪ್ರಕಾರ ವರನ ಕಡೆಯವರು ವಧುವಿಗೆ ಮಲ್ಲಿಗೆ ಹೂವಿನ ಮೊಗ್ಗಿನ ಜಡೆ ಕೊಡಬೇಕಿತ್ತು. ಆದರೆ, ವರದ ಕಡೆಯವರು ಕನಕಾಂಬರ ಹೂವಿನ ಜಡೆ ನೀಡಿದ್ದರು. ಅಷ್ಟಕ್ಕೆ ಆಕ್ಷೇಪ ವ್ಯಕ್ತಪಡಿಸಿದ ವಧುವಿನ ಕಡೆಯವರು, ಜಗಳ ಮಾಡಲು ಆರಂಭಿಸಿದ್ದರು.’
‘ಇಬ್ಬರ ನಡುವೆಯೂ ಮಾತಿನ ಚಕಮಕಿ ನಡೆದು, ಮಂಟಪದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಕ್ಷಮೆ ಕೋರಿದ್ದ ವರನ ಸಂಬಂಧಿಕರು, ವಧುವಿನ ಸಂಬಂಧಿಕರನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದರು. ಅದಕ್ಕೆ ಒಪ್ಪದ ವಧುವಿನ ಕಡೆಯವರೆಲ್ಲ ಮದುವೆಯನ್ನು ರದ್ದುಪಡಿಸಿ ವಧುವಿನ ಸಮೇತ ಮಂಟಪದಿಂದ ಹೊರಹೋದರು’ ಎಂದು ಸಂಬಂಧಿ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.