ಬೆಂಗಳೂರು: ವೈಟ್ಫೀಲ್ಡ್ ಬಳಿ ಮ್ಯಾನ್ಹೋಲ್ ಸ್ವಚ್ಛಗೊಳಿಸುತ್ತಿದ್ದ ವೇಳೆ ಅಸ್ವಸ್ಥಗೊಂಡು ವರ್ತೂರಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಾಗಿದ್ದ ಕಾರ್ಮಿಕ ಪೃಥ್ವಿರಾಜ್ (24) ಎಂಬುವರು ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ಮೃತಪಟ್ಟಿದ್ದಾರೆ.
ಹೊಸಕೋಟೆ ತಾಲ್ಲೂಕಿನ ನಡವತ್ತಿ ಗ್ರಾಮದ ಅವರು, ಮೇ 24ರಂದು ವೈಟ್ಫೀಲ್ಡ್ ಬಳಿಯ ಇಸಿಸಿ ರಸ್ತೆಯ ಜಟ್ಟಿ ಮಾರಕಸ್ವಾಮಿ ವಿಲ್ಲಾದ ಮ್ಯಾನ್ಹೋಲ್ಗೆ ಇಳಿದು ಕೆಲಸ ಮಾಡುತ್ತಿದ್ದರು. ಈ ವೇಳೆ ಉಸಿರಾಟದ ತೊಂದರೆ ಉಂಟಾಗಿ ಮ್ಯಾನ್ಹೋಲ್ನಲ್ಲೇ ಕುಸಿದು ಬಿದ್ದಿದ್ದರು. ಅದನ್ನು ಗಮನಿಸಿದ್ದ ಸಹ ಕಾರ್ಮಿಕರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಮತ್ತೊಬ್ಬ ಕಾರ್ಮಿಕ ರಾಜು (17) ಎಂಬುವರೂ ಅಸ್ವಸ್ಥಗೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿಯೂ ಚಿಂತಾಜನಕವಾಗಿದೆ.
‘ಪ್ರತ್ಯಕ್ಷದರ್ಶಿಗಳು ಹಾಗೂ ಕಾರ್ಮಿಕರ ಹೇಳಿಕೆ ಆಧರಿಸಿ ಎಫ್ಐಆರ್ ದಾಖಲಿಸಿಕೊಂಡಿದ್ದೇವೆ. ಹಲವರ ವಿಚಾರಣೆ ನಡೆಸಬೇಕಿದ್ದು, ಬಳಿಕವೇ ಘಟನೆಗೆ ಕಾರಣ ಯಾರು ಎಂಬುದು ಗೊತ್ತಾಗಲಿದೆ’ ಎಂದು ವೈಟ್ಫೀಲ್ಡ್ ಠಾಣೆಯ ಪೊಲೀಸರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.