ಯಲಹಂಕ: `ರಾಜಕಾರಣದಲ್ಲಿ ಕೆಲವು ಮಂದಿ ಮಾತ್ರ ಭ್ರಷ್ಠರಿರಬಹುದು. ಆದರೆ ರಾಜಕೀಯದಲ್ಲಿ ಇರುವವರೆಲ್ಲ ಭ್ರಷ್ಟರು ಎನ್ನುವ ರೀತಿಯಲ್ಲಿ ಬಿಂಬಿಸುವುದು ಒಳ್ಳೆಯ ಬೆಳವಣಿಗೆಯಲ್ಲ~ ಎಂದು ಶಾಸಕ ಕೃಷ್ಣಬೈರೇಗೌಡ ವಿಷಾದಿಸಿದರು.
ಬ್ಯಾಟರಾಯನಪುರ ವ್ಯಾಪ್ತಿಯ ಸಿಂಗಹಳ್ಳಿ ಗ್ರಾಮದಲ್ಲಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ನೂತನ ಸಭಾಂಗಣ ಕಟ್ಟಡ ಹಾಗೂ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ ನಿರ್ಮಿಸಿರುವ ಬಸ್ ತಂಗುದಾಣದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರಾಜಕೀಯದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಉತ್ತಮ ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿರುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಆದರೆ, ಮಾಧ್ಯಮಗಳು ಅಂಥವರ ಬಗ್ಗೆ ಪ್ರಚಾರ ಮಾಡದೆ, ಕೇವಲ ಭ್ರಷ್ಟರ ಬಗ್ಗೆ ವೈಭವೀಕರಿಸುತ್ತಿರುವುದರಿಂದ ಜನರಲ್ಲಿ `ರಾಜಕಾರಣಿಗಳೆಲ್ಲಾ ಒಂದೇ~ ಎಂಬ ಭಾವನೆ ಮೂಡಿ ಜಿಗುಪ್ಸೆ ಮೂಡುವಂತೆ ಮಾಡಿದೆ ಎಂದು ನೊಂದು ನುಡಿದರು.
ಬಿಬಿಆರ್ ಮತ್ತು ಆರ್ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬಿ.ರಾಮಕೃಷ್ಣಯ್ಯ, ಸಹಕಾರ ಸಂಘಗಳ ಉತ್ತಮ ಕಾರ್ಯನಿರ್ವಹಣೆಯಿಂದ ಕಳೆದ ವರ್ಷ ಡಿಸಿಸಿ ಬ್ಯಾಂಕ್ 7.65 ಕೋಟಿ ರೂಪಾಯಿ ಲಾಭ ಗಳಿಸಲು ಸಾಧ್ಯವಾಯಿತು ಎಂದರು.
ವಿಧಾನ ಪರಿಷತ್ ಸದಸ್ಯ ದಯಾನಂದರೆಡ್ಡಿ, ಜಿ.ಪಂ.ಸದಸ್ಯರಾದ ಕೆ.ಅಶೋಕನ್, ದಾನೇಗೌಡ ಮಾತನಾಡಿದರು. ಜಿ.ಪಂ. ಉಪಾಧ್ಯಕ್ಷೆ ಅನ್ನಪೂರ್ಣ ಕೃಷ್ಣಮೂರ್ತಿ, ಸದಸ್ಯೆ ಶುಭ ನರಸಿಂಹಮೂರ್ತಿ, ತಾ.ಪಂ.ಅಧ್ಯಕ್ಷೆ ತ್ರಿವೇಣಿ ರಾಜಣ್ಣ, ಉಪಾಧ್ಯಕ್ಷೆ ಲಕ್ಷ್ಮೀ ರಮೇಶ್, ಸದಸ್ಯರಾದ ಇ.ಗುರುಮೂರ್ತಿ, ಬಾಲಮ್ಮ, ಗ್ರಾ.ಪಂ. ಅಧ್ಯಕ್ಷೆ ರತ್ನಮ್ಮ, ಮಾಜಿ ಅಧ್ಯಕ್ಷರಾದ ಕೆ. ಶ್ರೀನಿವಾಸಯ್ಯ, ಸಿ.ವೆಂಕಟೇಶ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.