ADVERTISEMENT

ರಾಜಾ ರವಿವರ್ಮನ ಕಲಾಲೋಕ ಅನಾವರಣ

131 ಕಲಾಕೃತಿಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 8 ಜುಲೈ 2016, 19:30 IST
Last Updated 8 ಜುಲೈ 2016, 19:30 IST
ಪ್ರದರ್ಶನದಲ್ಲಿದ್ದ ರಾಜಾ ರವಿವರ್ಮ ಅವರ ಚಿತ್ರಕಲಾಕೃತಿಗಳನ್ನುಯುವತಿಯೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದರು
ಪ್ರದರ್ಶನದಲ್ಲಿದ್ದ ರಾಜಾ ರವಿವರ್ಮ ಅವರ ಚಿತ್ರಕಲಾಕೃತಿಗಳನ್ನುಯುವತಿಯೊಬ್ಬರು ಮೊಬೈಲ್‌ನಲ್ಲಿ ಸೆರೆಹಿಡಿದರು   

ಬೆಂಗಳೂರು:  ಹಂಸ– ದಮಯಂತಿ ಸಂವಾದ, ಅಹಲ್ಯೆಯ ಶಾಪವಿಮೋಚನೆ, ಸ್ನಿಗ್ಧ ಸೌಂದರ್ಯದ ತಿಲೋತ್ತಮೆ, ಮೋಹಿನಿಯ ಉಯ್ಯಾಲೆಯಾಟ,  ದ್ರೌಪದಿ ವಸ್ತ್ರಾಪಹಾರ, ಗಂಗಾವತರಣ.

ರಾಜಾ ರವಿವರ್ಮ ರಚಿಸಿರುವ ಇಂತಹ ಅಪೂರ್ವ ಕಲಾಕೃತಿಗಳ ಸೊಬಗನ್ನು  ಒಂದೇ ಸೂರಿನಡಿ ಕಣ್ತುಂಬಿಕೊಳ್ಳುವ ಅವಕಾಶ ನಗರದ ಕಲಾ ರಸಿಕರ ಪಾಲಿಗೆ ಒದಗಿ ಬಂದಿದೆ.

ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯ (ಎನ್‌ಜಿಎಂಎ) ಹಾಗೂ ದಿ ರಾಜಾ ರವಿವರ್ಮ ಹೆರಿಟೇಜ್‌ ಫೌಂಡೇಷನ್‌ ವತಿಯಿಂದ  ಏರ್ಪಡಿಸಿರುವ ‘ರಾಜಾ ರವಿವರ್ಮ ರಾಯಲ್‌ ಲಿಥೋಗ್ರಪಿ ಆಂಡ್‌ ಲೆಗಸಿ’ ಕಲಾ ಪ್ರದರ್ಶನದಲ್ಲಿ  131 ಕಲಾಕೃತಿಗಳು ಪ್ರದರ್ಶನಗೊಂಡಿವೆ.

ರಾಮಾಯಣ, ಮಹಾಭಾರತ ಮತ್ತು ಇತರ ಪುರಾಣಗಳ ಕಥಾವಸ್ತುಗಳನ್ನು ಆಧರಿಸಿದ ಕಲಾಕೃತಿಗಳು, ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ಮದುವೆ ಸಂಭ್ರಮ, ಋಷಿ ಮುನಿಗಳ ಬದುಕಿನ ಕುರಿತ ಕಲಾಕೃತಿಗಳು, ಭಾರತೀಯ ನಾರಿಯರ ಸಹಜ ಸೌಂದರ್ಯವನ್ನು ಬಿಂಬಿಸುವ ಕಲಾಕೃತಿಗಳು ಪ್ರದರ್ಶನದಲ್ಲಿವೆ.

‘ಸಾಮಾನ್ಯ ಜನರಿಗೂ ಕಲೆಯನ್ನು ತಲುಪಿಸಿದ ಕೀರ್ತಿ ರವಿ ವರ್ಮ ಅವರಿಗೆ  ಸಲ್ಲಬೇಕು. 1894ರ ಸಂದರ್ಭದಲ್ಲಿ ಭಾರತದಲ್ಲಿ ಯಾವುದೇ ಆಫ್‌ಸೆಟ್‌ ಪ್ರಿಂಟಿಂಗ್‌ ತಂತ್ರಜ್ಞಾನವಾಗಲೀ, ಬಣ್ಣವನ್ನು ಮುದ್ರಿಸುವ ತಂತ್ರಜ್ಞಾನವಾಗಲೀ ಇರಲಿಲ್ಲ.

ರವಿ ವರ್ಮ  ಸುಣ್ಣದ ಕಲ್ಲಿನಲ್ಲಿ  ಅಚ್ಚುಗಳನ್ನು ತಯಾರಿಸಿ, ವಿವಿಧ ಬಣ್ಣಗಳನ್ನು ಬಳಸಿ ಕಲಾಕೃತಿಗಳನ್ನು ರಚಿಸಿದರು. ಕಲಾಕೃತಿಯ ಸೂಕ್ಷ್ಮ ವಿಚಾರಗಳತ್ತಲೂ  ಗಮನ ಹರಿಸುವ ಮೂಲಕ ಅವುಗಳಲ್ಲಿ ಜೀವಂತಿಕೆ ತುಂಬಿದರು’ ಎನ್ನುತ್ತಾರೆ ಫೌಂಡೇಷನ್‌ನ ಗೌರವ ಕಾರ್ಯದರ್ಶಿ ಗಣೇಶ್‌ ಶಿವಸ್ವಾಮಿ.

‘ದೇವರಕೋಣೆ ಕಲ್ಪನೆ ಜನಪ್ರಿಯವಾಗಿದ್ದೇ ರವಿ ವರ್ಮ ರಚನೆಯ ಕಲಾಕೃತಿಗಳಿಂದ. ಸಮಾಜದ ಒಂದು ವರ್ಗದ ಜನರಿಗೆ ದೇವಸ್ಥಾನ ಪ್ರವೇಶ ನಿಷಿದ್ಧವಾಗಿದ್ದ ಕಾಲವದು. ಅಂತಹವರಿಗೆ ದೇವಸ್ಥಾನದ ಪಕ್ಕದ ಬೀದಿಯಲ್ಲಿ ನಡೆದುಕೊಂಡು ಹೋಗುವುದಕ್ಕೂ ಬಿಡುತ್ತಿರಲಿಲ್ಲ.

ದೇವರ  ಚಿತ್ರ ಹೇಗಿರುತ್ತದೆ ಎಂಬ ಕಲ್ಪನೆಯೂ ಈ ವರ್ಗದ ಜನರಲ್ಲಿ ಇರಲಿಲ್ಲ. ರವಿ ವರ್ಮ ಹಿಂದೂ ದೇವರ ಕಲಾಕೃತಿಗಳನ್ನು ರಚಿಸಿ ಅವುಗಳನ್ನು ತಮ್ಮ ಪ್ರೆಸ್‌ನಲ್ಲಿ ಲಿಥೋಗ್ರಫಿ  ಮೂಲಕ ಮುದ್ರಿಸಿದರು. ಅವರಿಂದಾಗಿ ಚಿತ್ರಕಲಾಕೃತಿಗಳಿಗೂ ಪೂಜೆ ಸಲ್ಲುವಂತಾಯಿತು’ ಎಂದು ಅವರು ಹೇಳಿದರು.

ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್‌. ವೆಂಕಟಾಚಲಯ್ಯ ಅವರು  ಶುಕ್ರವಾರ ಕಲಾ ಪ್ರದರ್ಶನವನ್ನು ಉದ್ಘಾಟಿಸಿದರು.
‘ಪ್ರದರ್ಶನದಲ್ಲಿರುವ ಕಲಾಕೃತಿಗಳೂ ರವಿ ವರ್ಮ ಪ್ರೆಸ್‌ನಲ್ಲಿ ಮುದ್ರಣಗೊಂಡ ಮೂಲ ಕೃತಿಗಳು. ಇಷ್ಟೊಂದು ಕಲಾಕೃತಿಗಳು ಒಟ್ಟಿಗೆ ಪ್ರದರ್ಶನಗೊಳ್ಳುತ್ತಿರುವುದು ಇದೇ ಮೊದಲು. 

126 ಕಲಾಕೃತಿಗಳನ್ನು ಹೇಮಾಮಾಲಿನಿ–ಗಣೇಶ್‌ ಶಿವಸ್ವಾಮಿ ದಂಪತಿ ಸಂಗ್ರಹಿಸಿದ್ದಾರೆ. ಅನಿರುದ್ಧ ಹಲ್ದೀಪುರ್ಕರ್‌ ಅವರ ಸಂಗ್ರಹದ ನಾಲ್ಕು ಹಾಗೂ ಮಣಿಪಾಲದ ಹಸ್ತಶಿಲ್ಪ ಪರಂಪರೆ ಗ್ರಾಮದ ಸಂಗ್ರಹದಲ್ಲಿರುವ ಒಂದು ಕಲಾಕೃತಿ  ಪ್ರದರ್ಶನದಲ್ಲಿದೆ’ ಎಂದು ಹೆರಿಟೇಜ್‌ ಫೌಂಡೇಷನ್‌ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೀತಾಂಜಲಿ ಮೈನಿ ತಿಳಿಸಿದರು. ಆಗಸ್ಟ್‌ 14ರವರೆಗೆ ಕಲಾ ಪ್ರದರ್ಶನ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.