ADVERTISEMENT

ರಾಜ್ಯಕ್ಕೆ 1,500 ಯೋಧರ ಆಗಮನ

ರಾಜ್ಯ ವಿಧಾನಸಭಾ ಚುನಾವಣೆಗೆ ಭದ್ರತೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 20:05 IST
Last Updated 7 ಏಪ್ರಿಲ್ 2018, 20:05 IST
ರಾಜ್ಯಕ್ಕೆ 1,500 ಯೋಧರ ಆಗಮನ
ರಾಜ್ಯಕ್ಕೆ 1,500 ಯೋಧರ ಆಗಮನ   

ಬೆಂಗಳೂರು: ವಿಧಾನಸಭಾ ಚುನಾವಣೆ ವೇಳೆ ಭದ್ರತೆ ಕೈಗೊಳ್ಳುವುದಕ್ಕಾಗಿ ಉತ್ತರ ಭಾರತದ 1,500 ಯೋಧರು ಶುಕ್ರವಾರ ಬೆಳಿಗ್ಗೆ ನಗರಕ್ಕೆ ಬಂದಿದ್ದಾರೆ.

ವೈಟ್‌ಫೀಲ್ಡ್‌ ರೈಲ್ವೆ ನಿಲ್ದಾಣಕ್ಕೆ ವಿಶೇಷ ರೈಲಿನಲ್ಲಿ ಬಂದ ಯೋಧರನ್ನು ಡಿಸಿಪಿ ಅಬ್ದುಲ್ ಅಹದ್‌ ಸ್ವಾಗತಿಸಿದರು. ಯೋಧರಿಗೆ ಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಯಿತು. ನಂತರ 60ಕ್ಕೂ ಹೆಚ್ಚು ವಾಹನಗಳಲ್ಲಿ ಯೋಧರನ್ನು ರಾಜ್ಯದ ವಿವಿಧ ಜಿಲ್ಲೆಗಳಿಗೆ ಕಳುಹಿಸಿಕೊಡಲಾಯಿತು.

ಚುನಾವಣೆ ಪ್ರಯುಕ್ತ ಎಲ್ಲ ಜಿಲ್ಲೆಗಳಲ್ಲೂ ಮಿಲಿಟರಿ ಪಡೆಗಳು ಗಸ್ತು ತಿರುಗಲಾರಂಭಿಸಿವೆ. ಹೆಚ್ಚು ಪ್ರಮಾಣದಲ್ಲಿ ಮತದಾನವಾಗಲು ಮತ್ತು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ಪಡೆಗಳು ಕ್ರಮ ಕೈಗೊಳ್ಳಲಿವೆ.

ADVERTISEMENT

‌‘ರಾಜ್ಯಕ್ಕೆ ಸೀಮಾ ಸುರಕ್ಷಾ ಬಲದ 10 ತುಕಡಿ, ಐಟಿಬಿಪಿಯ 3 ತುಕಡಿ ಹಾಗೂ ಉತ್ತರ ಭಾರತದಿಂದ 1,500ಕ್ಕೂ ಹೆಚ್ಚು ಯೋಧರು ಆಗಮಿಸಿದ್ದಾರೆ. ಅವರಿಗೆ ಬೇಕಾದ ಮೂಲಸೌಕರ್ಯ ಹಾಗೂ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ಅವರು ಯಾವ ಜಿಲ್ಲೆಗಳಿಗೆ ಹೋಗುತ್ತಾರೋ ಅಲ್ಲಿನ ಸ್ಥಳೀಯ ಪೊಲೀಸರು ಸೂಕ್ತ ವ್ಯವಸ್ಥೆ ಮಾಡಿಕೊಡಲಿದ್ದಾರೆ’ ಎಂದು ಡಿಸಿಪಿ ಅಬ್ದುಲ್‌ ಅಹದ್ ತಿಳಿಸಿದರು.

ಈ ವೇಳೆ ಎಸಿಪಿ ವಾಸು, ಕಾಡುಗೋಡಿ ಠಾಣೆ ಇನ್‌ಸ್ಪೆಕ್ಟರ್‌ ಚೆನ್ನೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.