ADVERTISEMENT

ರಾಜ್ಯದಲ್ಲಿ ನವೋದ್ಯಮ ಉತ್ತೇಜನಕ್ಕೆ ಐಐಎಂಬಿ, ಐಐಐಟಿ–ಬಿ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 9 ಜೂನ್ 2016, 19:30 IST
Last Updated 9 ಜೂನ್ 2016, 19:30 IST
ಐಐಎಂಬಿ ಪ್ರಭಾರ ನಿರ್ದೇಶಕ ಆರ್‌.ಶ್ರೀನಿವಾಸನ್‌ ಅವರು ಐಐಐಟಿ ಆವಿಷ್ಕಾರ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ವಿ. ಜಗದೀಶ್‌ ಅವರಿಗೆ ಒಪ್ಪಂದದ ಪ್ರತಿ ನೀಡಿದರು. ಐಐಎಂಬಿಯ ಎನ್‌ಎಸ್‌ಆರ್‌ಸಿಇಎಲ್‌ ಮುಖ್ಯ ನಿರ್ವಹಣಾ ಅಧಿಕಾರಿ ರಾಜೀವ್‌ ಸಾಚನಿ, ಕೇಂದ್ರದ ಮುಖ್ಯಸ್ಥ ಪ್ರೊ.ಕೆ. ಕುಮಾರ್‌, ರಮೇಶ್‌ ಸುಂದರ ರಾಮನ್‌ ಚಿತ್ರದಲ್ಲಿದ್ದಾರೆ.
ಐಐಎಂಬಿ ಪ್ರಭಾರ ನಿರ್ದೇಶಕ ಆರ್‌.ಶ್ರೀನಿವಾಸನ್‌ ಅವರು ಐಐಐಟಿ ಆವಿಷ್ಕಾರ ಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ವಿ. ಜಗದೀಶ್‌ ಅವರಿಗೆ ಒಪ್ಪಂದದ ಪ್ರತಿ ನೀಡಿದರು. ಐಐಎಂಬಿಯ ಎನ್‌ಎಸ್‌ಆರ್‌ಸಿಇಎಲ್‌ ಮುಖ್ಯ ನಿರ್ವಹಣಾ ಅಧಿಕಾರಿ ರಾಜೀವ್‌ ಸಾಚನಿ, ಕೇಂದ್ರದ ಮುಖ್ಯಸ್ಥ ಪ್ರೊ.ಕೆ. ಕುಮಾರ್‌, ರಮೇಶ್‌ ಸುಂದರ ರಾಮನ್‌ ಚಿತ್ರದಲ್ಲಿದ್ದಾರೆ.   

ಬೆಂಗಳೂರು: ನವೋದ್ಯಮಗಳಿಗೆ ಉತ್ತೇಜನ ನೀಡುವ ಸಲುವಾಗಿ ನಗರದ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ (ಐಐಎಂಬಿ) ಹಾಗೂ ಇಂಟರ್‌ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇನ್ಫಾರ್ಮೆಷನ್‌ ಟೆಕ್ನಾಲಜಿ ಸಂಸ್ಥೆಗಳು (ಐಐಐಟಿ–ಬಿ) ಒಪ್ಪಂದ ಮಾಡಿಕೊಂಡಿವೆ. ಐಐಎಂಬಿಯಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಉಭಯ ಸಂಸ್ಥೆಗಳ ಪ್ರತಿನಿಧಿಗಳು ಒಪ್ಪಂದಕ್ಕೆ ಸಹಿ ಹಾಕಿದರು.

ಐಐಎಂಬಿಯ ಉದ್ಯಮಶೀಲತೆ ಕಲಿಕೆ ಕೇಂದ್ರದ ಮುಖ್ಯಸ್ಥ ಪ್ರೊ.ಸುರೇಶ್‌ ಭಾಗವತಲು ಮಾತನಾಡಿ, ‘ಐಐಎಂಬಿ ಹಾಗೂ ಐಐಐಟಿಬಿ ಸಂಸ್ಥೆಗಳು ದಶಕಗಳಿಂದ ಉದ್ಯಮಶೀಲತೆಯ ಅಭಿವೃದ್ಧಿಗೆ ಅನುಭವ ಹಂಚಿಕೊಳ್ಳುತ್ತಿವೆ. ದೇಶದಲ್ಲಿ ಉದ್ಯಮ ಆರಂಭಕ್ಕೆ ಇನ್ನಷ್ಟು ಉತ್ತಮ ವಾತಾವರಣ ಸೃಷ್ಟಿಸುವುದು ಸಂಸ್ಥೆಗಳ ಗುರಿ’ ಎಂದರು.

ಎರಡೂ ಸಂಸ್ಥೆಗಳು ಯುವ ನವೋದ್ಯಮಿಗಳಿಗೆ ತಂತ್ರಜ್ಞಾನದ ಹಾಗೂ ಉದ್ಯಮಶೀಲತೆಯ ಮಾರ್ಗದರ್ಶನ ನೀಡಲಿವೆ. ಐಐಎಂಬಿ ಪ್ರಭಾರ ನಿರ್ದೇಶಕ ಪ್ರೊ.ಆರ್‌.ಶ್ರೀನಿವಾಸನ್‌ ಮಾತನಾಡಿ, ‘ಈ ಸಹಭಾಗಿತ್ವದಿಂದ ಉಭಯ ಸಂಸ್ಥೆಗಳು ಜತೆಗೂಡಿ ಕೆಲಸ ಮಾಡಬಹುದು’ ಎಂದರು.

ಐಐಟಿಬಿ ನಿರ್ದೇಶಕ ಪ್ರೊ.ಎಸ್‌.ಸಡಗೋಪನ್‌ ಮಾತನಾಡಿ, ‘ಎರಡು ಸಂಸ್ಥೆಗಳ ಆವಿಷ್ಕಾರ ಕೇಂದ್ರಗಳು ಒಪ್ಪಂದ ಮಾಡಿಕೊಂಡಿರುವುದು ಮಹತ್ವದ ಬೆಳವಣಿಗೆ. ಇದರಿಂದ ನವೋದ್ಯಮಗಳಿಗೆ ಹೆಚ್ಚಿನ ಲಾಭವಾಗಲಿದೆ’ ಎಂದು ಪ್ರತಿಪಾದಿಸಿದರು.

ಐಐಟಿಬಿಯ ಆವಿಷ್ಕಾರ ಕೇಂದ್ರ 2009ರಲ್ಲೇ ಆರಂಭವಾಗಿದೆ. ಪ್ರಸ್ತುತ ಆರೋಗ್ಯ ಸೇವೆ, ಇಂಧನ ಹಾಗೂ ಸಾರಿಗೆ ಕ್ಷೇತ್ರಕ್ಕೆ ಸಂಬಂಧಿಸಿದ 17 ನವೋದ್ಯಮಗಳಿಗೆ ಮಾರ್ಗದರ್ಶನ ನೀಡುತ್ತಿದೆ. 18 ಕಂಪೆನಿಗಳು ಐಐಎಂಬಿಯ ಕೇಂದ್ರದ ನೆರವು ಪಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.