ಬೆಳಗಾವಿ: ಇಲ್ಲಿನ ಜಿಲ್ಲಾ ಅಪರಾಧ ಪತ್ತೆ ದಳದ ಇನ್ಸ್ಪೆಕ್ಟರ್ ಉದ್ದಪ್ಪ ಕಟ್ಟಿಕರ್ ಪರೋಕ್ಷವಾಗಿ ರಾಜ್ಯ ಸರ್ಕಾರದ ವಿರುದ್ಧ ಫೇಸ್ಬುಕ್ನಲ್ಲಿ ಮಾಡಿರುವ ಪೋಸ್ಟ್ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾದಾಗ ‘ನೈತಿಕ ಅಧಃಪತನದ ಪರಮಾವಧಿಗೆ ಸಾಕ್ಷಿ ಇಂದಿನ ಕರ್ನಾಟಕದ ಘಟನಾವಳಿ’ ಎಂದು ಬರೆದಿದ್ದಾರೆ.
‘ಯೋಗ್ಯರಿಂದ ಪ್ರಗತಿ, ಅಯೋಗ್ಯರಿಂದ ಅವನತಿ, ಆಯ್ಕೆ ನಮ್ಮ ಕೈಯಲ್ಲಿ’, ‘ಮೂರೂ ಬಿಟ್ಟ ಅನರ್ಹರಿಗೆ ಅಧಿಕಾರ, ಪ್ರಜಾಪ್ರಭುತ್ವಕ್ಕೆ ಮಾಡಿದ ಅಪಚಾರ, ಅನುಭವಿಸೋದು ಜನರ ಗ್ರಹಚಾರ...’, ‘ದೇಶಕ್ಕಾಗಿ ದುಡಿಯುವವರು ಒಂದು ಕಡೆ, ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಳ್ಳುವವರು ಇನ್ನೊಂದು ಕಡೆ... ಎತ್ತು ಏರಿಗೆ ಎಳೆದರೆ ಕೋಣ ನೀರಿಗೆಳೆದಂತೆ...’, ‘ಜಾತ್ಯತೀತರ ಸೋಗಿನಲ್ಲಿ ಜಾತಿವಾದಿಗಳು ಮತ್ತು ಕೋಮುವಾದಿಗಳು!’, ‘ದೇಶದ್ರೋಹಿಗಳು ಒಂದಾದ ದಿನ ಈ ದಿನ...’ ಎಂದು ಅವರು ಪೋಸ್ಟ್ ಮಾಡಿದ್ದಾರೆ.
‘ದೇಶದ ಆರ್ಥಿಕ ಸ್ಥಿತಿಯನ್ನು ಪ್ರಧಾನಿ ನರೇಂದ್ರ ಮೋದಿ ಸುಭದ್ರಪಡಿಸಿದ್ದಾರೆ’ ಎನ್ನುವ ಪೋಸ್ಟ್ ಅನ್ನು ಇತರರಿಗೆ ಶೇರ್ ಮಾಡಿದ್ದಾರೆ.
ಉದ್ದಪ್ಪ ಕಟ್ಟಿಕರ ಅವರು ಪ್ರತಿಕ್ರಿಯೆಗೆ ಲಭ್ಯವಾಗಲಿಲ್ಲ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.