ADVERTISEMENT

ರೈತಸಂಘದ ಧರಣಿ ಹಿಂದಕ್ಕೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2012, 19:30 IST
Last Updated 23 ಜನವರಿ 2012, 19:30 IST

ಬೆಂಗಳೂರು: ಬೆಂಗಳೂರು ಉತ್ತರ ವಲಯದಲ್ಲಿ ಪೆರಿಫೆರಲ್ ವರ್ತುಲ ರಸ್ತೆ ನಿರ್ಮಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ರೈತರ ಜಮೀನು ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿ ಏಳು ವರ್ಷಗಳಾದರೂ ಇದುವರೆಗೂ ಪರಿಹಾರ ನೀಡಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಳೆದ ಹದಿನೈದು ದಿನಗಳಿಂದ ಬಿಡಿಎ ಪ್ರಧಾನ ಕಚೇರಿಯ ಮುಂದೆ ನಡೆಸುತ್ತಿದ್ದ ಧರಣಿ ಸತ್ಯಾಗ್ರಹವನ್ನು ಸೋಮವಾರ ಕೈ ಬಿಟ್ಟಿದೆ.

`ಇದೇ 27 ರಂದು ರೈತರಿಗೆ ಪರಿಹಾರ ನೀಡುವ ವಿಚಾರವಾಗಿ ಚರ್ಚಿಸಲು ಸೋಮವಾರ ಮುಖ್ಯಮಂತ್ರಿಯವರ ಕಚೇರಿಯಿಂದ ಪತ್ರ ಬಂದಿದೆ. ನಾವೂ ಚರ್ಚೆಗೆ ಸಿದ್ಧವಿದ್ದೇವೆ. ಈ ಹಿನ್ನೆಲೆಯಲ್ಲಿ ಧರಣಿ ಕೈ ಬಿಡಲಾಗಿದೆ~ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

`ರೈತರ ಜಮೀನಿಗೆ ಸದ್ಯ ಕೋಟ್ಯಂತರ ರೂಪಾಯಿಗಳ ಬೆಲೆ ಇದೆ. ರಸ್ತೆ ನಿರ್ಮಿಸುವುದೇ ಆದರೆ ಜಮೀನಿಗೆ ವೈಜ್ಞಾನಿಕವಾಗಿ ಬೆಲೆ ನಿಗದಿಗೊಳಿಸಬೇಕು. ಕೃಷಿ ಚಟುವಟಿಕೆ ನಡೆಸದಿರುವ ಕಳೆದ ಏಳು ವರ್ಷಗಳ ಅವಧಿಯಲ್ಲಿನ ಪ್ರತಿ ತಿಂಗಳಿಗೆ 6 ಸಾವಿರ ರೂ. ಪರಿಹಾರ ಘೋಷಿಸಿ, ರೈತರಿಗೆ ಎನ್‌ಓಸಿ ನೀಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.