ಬೆಂಗಳೂರು: `ಸೇವೆಯನ್ನು ಜೀವಾಳ ಮಾಡಿಕೊಂಡಿರುವ ರೋಟರಿ ಕ್ಲಬ್ನ ಕಾರ್ಯವೈಖರಿ ಇತರೆ ಸಂಸ್ಥೆಗಳಿಗೆ ಮಾದರಿ' ಎಂದು ರೋಟರಿ ಕ್ಲಬ್ ಆಫ್ ಬೆಂಗಳೂರು ಅಂತರರಾಷ್ಟ್ರೀಯ ಅಧ್ಯಕ್ಷ ಕಲ್ಯಾಣ ಬ್ಯಾನರ್ಜಿ ಹೇಳಿದರು.
ರೋಟರಿ ಕ್ಲಬ್ ಆಫ್ ಬೆಂಗಳೂರು ಡಿಸ್ಟ್ರಿಕ್ಟ್ 3190 ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿ, `ನಮ್ಮಿಂದಾದ ಸಹಾಯವನ್ನು ಸಮಾಜದ ಬಡ ದುರ್ಬಲ ವರ್ಗದವರಿಗೆ ಮಾಡಬೇಕು. ಅಂತಹ ಕಾರ್ಯವನ್ನು ರೋಟರಿ ಕ್ಲಬ್ ಯಾವುದೇ ಪಕ್ಷಪಾತವಿಲ್ಲದೆ ಸಮಾಜದ ಸೇವೆಯನ್ನು ದೃಷ್ಟಿಯಲ್ಲಿರಿಸಿಕೊಂಡು ಮಾಡುತ್ತಿದೆ' ಎಂದರು.
`ನಮ್ಮನ್ನು ನಾವು ಬದಲಿಸಿಕೊಂಡರೆ ಇಡೀ ಜಗತ್ತನ್ನೇ ಬದಲಿಸಬಹುದು. ಒಂದು ದೀಪ ತನ್ನ ಸಣ್ಣ ಬೆಳಕಿನಿಂದ ಕತ್ತಲೆಯನ್ನು ಓಡಿಸುವಂತೆ ರೋಟರಿ ಕ್ಲಬ್ ಸಮಾಜಕ್ಕೆ ತನ್ನಿಂದಾದ ಬೆಳಕನ್ನು ನೀಡುತ್ತಿದೆ' ಎಂದು ಹೇಳಿದರು.
ಡಿಸ್ಟ್ರಿಕ್ಟ್ ಗವರ್ನರ್ ಕೆ.ಎಸ್.ನಾಗೇಂದ್ರ ಮಾತನಾಡಿ, `ರೋಟರಿಯ ಜನೋಪಯೋಗಿ ಕಾರ್ಯಗಳಿಂದ ಸಮಾಜವು ಗುರುತಿಸುತ್ತಿದೆ. ಸರ್ಕಾರಿ ಶಾಲೆಯ ಮಕ್ಕಳಿಗೆ ಸೌರ ವಿದ್ಯುದ್ದೀಪ ಮತ್ತು ಶಬ್ದಕೋಶವನ್ನು ಉಚಿತವಾಗಿ ನೀಡುತ್ತಿದೆ' ಎಂದು ಹೇಳಿದರು.
ರೋಟರಿ ಕ್ಲಬ್ ಆಫ್ ಬೆಂಗಳೂರು ನೂತನ ಅಧ್ಯಕ್ಷೆ ಪೂರ್ಣಿಮಾ ರಂಗನಾಥ್ ಮಾತನಾಡಿ, `ರೋಟರಿಯು ಸಮಾಜ ಸೇವಾ ದೃಷ್ಟಿಯಿಂದ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಚಿಕ್ಕ ಸೇವೆಯಿಂದಲೇ ಬಹು ದೊಡ್ಡ ಸಾಧನೆಯನ್ನು ಮಾಡಬಹುದು' ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.