ಬೆಂಗಳೂರು: ಖಾತೆ ಬದಲಾವಣೆಗೆ ರೂ. 15 ಸಾವಿರ ಲಂಚ ಕೇಳಿದ ಕೆಂಗೇರಿ ಹೋಬಳಿಯ ಕಂದಾಯ ನಿರೀಕ್ಷಕಿ ಸವಿತಾ ಮತ್ತು ಅವರ ಕಚೇರಿಯಲ್ಲಿ ಸಹಾಯಕ ಆಗಿ ಕೆಲಸ ಮಾಡುತ್ತಿರುವ ಎಸ್. ರಮೇಶ್ ಅವರು ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಕೆಂಗೇರಿಯ ಕೆ.ಎ. ರಾಮಚಂದ್ರ ಪಾಲಿಗೆ ಪಿತ್ರಾರ್ಜಿತವಾಗಿ ಬಂದಿರುವ 10 ಗುಂಟೆ ಜಮೀನಿನ ಖಾತೆ ಬದಲಾವಣೆಗೆ ಸವಿತಾ ರೂ. 20 ಸಾವಿರ ಲಂಚ ಕೇಳಿದ್ದರು. ನಂತರ, ರೂ. 15 ಸಾವಿರ ಲಂಚ ಕೊಟ್ಟರೆ ಕೆಲಸ ಮಾಡಿಕೊಡುವುದಾಗಿ ಒಪ್ಪಿಕೊಂಡಿದ್ದರು.
ಲಂಚ ಕೊಡಲು ಮನಸ್ಸು ಬಾರದೆ ರಾಮಚಂದ್ರ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದರು. ಸವಿತಾ ಅವರ ಬಂಧನಕ್ಕೆ ಲೋಕಾಯುಕ್ತ ಪೊಲೀಸರು ಬಲೆ ಬೀಸಿದರು. ರಮೇಶ್ ಅವರು ಸವಿತಾ ಅವರ ಪರವಾಗಿ ಬುಧವಾರ ಲಂಚ ಪಡೆಯುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದರು. ನಂತರ ಸವಿತಾ ಅವರನ್ನೂ ಪೊಲೀಸರು ಬಂಧಿಸಿದರು.
ಇವರಿಬ್ಬರನ್ನೂ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನ್ಯಾಯಾಲಯ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.