ADVERTISEMENT

ಲಂಚ: ಇನ್ಸ್‌ಪೆಕ್ಟರ್‌ಗೆ ಜಾಮೀನು ನಕಾರ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 19:10 IST
Last Updated 3 ಅಕ್ಟೋಬರ್ 2011, 19:10 IST

ಬೆಂಗಳೂರು: ಹೊಲಿಗೆ ಯಂತ್ರದ ಅಂಗಡಿ ಮಾಲೀಕರೊಬ್ಬರನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಐದು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಆರೋಪ ಹೊತ್ತ ಅಮೃತಹಳ್ಳಿ ಠಾಣೆಯ ಇನ್‌ಸ್ಪೆಕ್ಟರ್ ರತ್ನಾಕರ ಶೆಟ್ಟಿ ಅವರಿಗೆ ನಿರೀಕ್ಷಣಾ ಜಾಮೀನು ನೀಡಲು ಲೋಕಾಯುಕ್ತ ವಿಶೇಷ ಕೋರ್ಟ್ ಸೋಮವಾರ ನಿರಾಕರಿಸಿದೆ.

ಇವರ ಮೇಲೆ ಗಂಭೀರವಾದ ಆರೋಪ ಇದ್ದುದರಿಂದ ಜಾಮೀನು ನೀಡಲಾಗದು ಎಂದು ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್ ತಿಳಿಸಿದ್ದಾರೆ.

ಶಿವಾಜಿನಗರದಲ್ಲಿರುವ ನೂರ್ ಅಹ್ಮದ್ ಎಂಬುವರ ಹೊಲಿಗೆ ಯಂತ್ರದ ಅಂಗಡಿಗೆ ಸೆಪ್ಟೆಂಬರ್ 2ರಂದು ಬಂದಿದ್ದ ರತ್ನಾಕರ ಶೆಟ್ಟಿ, ಕಳವು ಮಾಲು ಖರೀದಿ ಸಿದ್ದ ಆರೋಪದ ಮೇಲೆ ತಪಾಸಣೆ ನಡೆಸಿದ್ದರು. ಬಳಿಕ ಅಂಗಡಿ ಮಾಲೀಕರನ್ನು ಠಾಣೆಗೆ ಕರೆದೊಯ್ದು ಹಿಂಸಿಸಿದ್ದರು.
 
ಅಂಗಡಿಯಲ್ಲಿದ್ದ 45 ಹೊಲಿಗೆ ಯಂತ್ರಗಳನ್ನೂ ಠಾಣೆಗೆ ತೆಗೆದುಕೊಂಡು ಹೋಗಿದ್ದರು. ಮೂರು ದಿನಗಳ ಕಾಲ ಅಂಗಡಿ ಮಾಲೀಕನನ್ನು ಠಾಣೆಯಲ್ಲಿ ಇರಿಸಿಕೊಂಡಿದ್ದ ಅವರು, ಐದು ಲಕ್ಷ ರೂಪಾಯಿ ನೀಡದಿದ್ದರೆ ಪ್ರಕರಣದಲ್ಲಿ ಸಿಲುಕಿಸುವುದಾಗಿ ಅಹ್ಮದ್ ಅವರಿಗೆ ಬೆದರಿಕೆ ಒಡ್ಡಿದ್ದರು ಎನ್ನುವುದು ಆರೋಪ.

50 ಸಾವಿರ ರೂಪಾಯಿ ನೀಡುವು ದಾಗಿ ಹೇಳಿ ಠಾಣೆಯಿಂದ ಹೊರ ಬಂದಿದ್ದ ಅಹ್ಮದ್ ಲೋಕಾ ಯುಕ್ತರಲ್ಲಿ ದೂರು ದಾಖಲಿಸಿದ್ದರು. ಲೋಕಾಯುಕ್ತ ಪೊಲೀಸರು ನೀಡಿದ್ದ  ರೆಕಾರ್ಡರ್‌ನಲ್ಲಿ ಲಂಚದ ಕುರಿತು ಸಾಕ್ಷ್ಯ ಕಲೆ ಹಾಕಿದ್ದರು.

ಇದರ ಆಧಾರದ ಮೇಲೆ ಲೋಕಾ ಯುಕ್ತ ಪೊಲೀಸರು ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿ ಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ತಮ್ಮನ್ನು ಬಂಧಿಸುವ ಭಯದಿಂದ ಅವರು ನಿರೀಕ್ಷಣಾ ಜಾಮೀನು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.