ಬೆಂಗಳೂರು: ಬಿಬಿಎಂಪಿಯಲ್ಲಿ ವರ್ಕ್ ಕೋರ್ಡ್ ನೀಡಿಕೆಯಲ್ಲಿ ಸುಮಾರು 3,500 ಕೋಟಿ ರೂಪಾಯಿ ಅವ್ಯವಹಾರ ನಡೆದಿದ್ದು, ಕೂಡಲೇ ಇದನ್ನು ಲೋಕಾಯುಕ್ತ ತನಿಖೆಗೆ ಒಪ್ಪಿಸಬೇಕು ಎಂದು ವಿರೋಧ ಪಕ್ಷಗಳು ಮಂಗಳವಾರದ ಸಭೆಯಲ್ಲಿ ಪಟ್ಟು ಹಿಡಿದವು. ಒತ್ತಡಕ್ಕೆ ಮಣಿದ ಮೇಯರ್ ಅವ್ಯವಹಾರ ಕುರಿತು ತನಿಖೆ ನಡೆಸಲು ಸದನ ಸಮಿತಿ ರಚಿಸುವುದಾಗಿ ಹೇಳಿದರು.
ವಿರೋಧಪಕ್ಷದ ನಾಯಕ ಎಂ.ನಾಗರಾಜ್, ‘ವರ್ಕ್ ಕೋಡ್ ನೀಡಿಕೆಯಲ್ಲಿ ಅವ್ಯವಹಾರ ನಡೆದಿದೆ. 2008-09ರಲ್ಲಿ ರೂ 1,500 ಕೋಟಿ ಹಾಗೂ 2009-10ರಲ್ಲಿ 2,181 ಕೋಟಿ ರೂಪಾಯಿ ಮೊತ್ತದ ಕಾಮಗಾರಿಗಳಿಗೆ ಅಕ್ರಮವಾಗಿ ವರ್ಕ್ಕೋಡ್ ನೀಡಿರುವ ಬಗ್ಗೆ ಲೆಕ್ಕ ಪರಿಶೋಧಕರು ವರದಿ ನೀಡಿದ್ದಾರೆ. ಕೂಡಲೇ ಇದನ್ನು ಲೋಕಾಯುಕ್ತ ತನಿಖೆಗೆ ವಹಿಸಬೇಕು’ ಎಂದು ಆಗ್ರಹಿಸಿದರು.
ಇದಕ್ಕೆ ಜೆಡಿಎಸ್ ನಾಯಕ ಪದ್ಮನಾಭ ರೆಡ್ಡಿ ದನಿಗೂಡಿಸಿದರು. ಬಳಿಕ ಮೇಯರ್ ಎಸ್.ಕೆ. ನಟರಾಜ್ ಮಾತನಾಡಿ, ‘ವರ್ಕ್ ಕೋಡ್ ಹಗರಣ ಎಂದು ಕರೆಯುವುದು ಸರಿಯಲ್ಲ. ಬಹುಪಾಲು ಕಾಮಗಾರಿಗಳಿಗೆ ಹಣ ಬಿಡುಗಡೆಯಾಗದ ಕಾರಣ ಅವ್ಯವಹಾರ ನಡೆದಿಲ್ಲ’ ಎಂದರು.
ಆಡಳಿತ ಪಕ್ಷದ ಬಿ.ಎಸ್.ಸತ್ಯನಾರಾಯಣ ಕೂಡ ಇದನ್ನೇ ಪುನರುಚ್ಚರಿಸಿದರು.
ಇದರಿಂದ ಕೆರಳಿದ ಕಾಂಗ್ರೆಸ್, ಜೆಡಿಎಸ್ ಸದಸ್ಯರು ಮೇಯರ್ ಪೀಠದ ಮುಂಭಾಗ ಧರಣಿ ನಡೆಸಿದಾಗ ಸಭೆಯನ್ನು ಮುಂದೂಡಲಾಯಿತು.
ಬಳಿಕ ಸಭೆ ಆರಂಭವಾದಾಗ ಆಯುಕ್ತ ಸಿದ್ದಯ್ಯ ಮಾತನಾಡಿ, ‘ವರ್ಕ್ ಕೋಡ್ ನೀಡಿಕೆಯಲ್ಲಿ 2,000 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂಬ ಆರೋಪ ಸರಿಯಲ್ಲ. ಎಂದರು.
ಇದರಿಂದ ಸಮಾಧಾನಗೊಳ್ಳದ ವಿರೋಧ ಪಕ್ಷಗಳು ಧರಣಿಯನ್ನು ಮುಂದುವರಿಸಿದವು.
ಕೊನೆಗೆ ಮೇಯರ್, ‘ವರ್ಕ್ ಕೋಡ್ ನೀಡಿಕೆಯಲ್ಲಿನ ಅಕ್ರಮಗಳ ಕುರಿತು ತನಿಖೆ ನಡೆಸಲು ಸದನ ಸಮಿತಿ ರಚಿಸಲಾಗುವುದು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.