ADVERTISEMENT

ವರ್ತೂರಿನ ಕೆ.ಕೆ ಆಂಗ್ಲಶಾಲೆ ಆಯ್ಕೆ

‘ಪರಿಸರ ಮಿತ್ರ ಶಾಲೆ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2014, 20:06 IST
Last Updated 5 ಮಾರ್ಚ್ 2014, 20:06 IST

ಬೆಂಗಳೂರು: ‘ಶಿಕ್ಷಣದಲ್ಲಿ ನಾವು ಪ್ರಗತಿ ಸಾಧಿಸು­ತ್ತಿದ್ದರೂ ಪರಿಸರ ಪ್ರಜ್ಞೆಯಲ್ಲಿ ಬಹಳ ಹಿಂದಿದ್ದೇವೆ’ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಡಾ.ವಾಮನ ಆಚಾರ್ಯ ಅಭಿಪ್ರಾಯ­­ಪಟ್ಟರು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಶಿವ­ಮೊಗ್ಗ­ದ ಪರಿಸರ ಅಧ್ಯಯನ ಕೇಂದ್ರದ ಸಹ­ಯೋ­ಗ­­ದಲ್ಲಿ ಬುಧವಾರ ಏರ್ಪಡಿಸಿದ್ದ  ‘ಪರಿಸರ ಮಿತ್ರ ಶಾಲೆ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತ­ನಾಡಿದರು.

ಕಳೆದ ಸೆಪ್ಟಂಬರ್‌ನಲ್ಲಿ ಆರಂಭ­ವಾಗಿದ್ದ  ಪರಿಸರ ಮಿತ್ರ ಶಾಲೆ ಕಾರ್ಯ­ಕ್ರಮದಲ್ಲಿ ನಗರ ಮತ್ತು ನಗರದ ಹೊರ­­ವಲಯದ  135 ಶಾಲೆಗಳು ಭಾಗವಹಿ­ಸಿ­­ದ್ದವು. ವಿದ್ಯಾರ್ಥಿ­ಗಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವ ಮತ್ತು ಶಾಲಾ ವಾತಾವರ­ಣ­ವನ್ನು ಪರಿಸರ ಸ್ನೇಹಿಯಾಗಿಸುವ ಸ್ಪರ್ಧೆಯ ಅಂತಿಮ ಸುತ್ತಿಗೆ ಬಂದಿದ್ದ 30 ಶಾಲೆ­ಗಳಲ್ಲಿ 21 ಶಾಲೆಗಳು ಪ್ರಶಸ್ತಿಗೆ ಆಯ್ಕೆಯಾಗಿವೆ.

ವರ್ತೂರಿನ ಕೆ.ಕೆ.ಆಂಗ್ಲ ಶಾಲೆ ರೂ. 20 ಸಾವಿರ ನಗದನ್ನು ಒಳಗೊಂಡ ‘ಪರಿಸರ ಮಿತ್ರ ಶಾಲೆ’ ಪ್ರಶಸ್ತಿಗೆ ಪಾತ್ರವಾಗಿದೆ.  ಬೆಟ್ಟಹಳ್ಳಿಯ ಸರ್ಕಾರಿ ಕಿರಿಯ ಪ್ರಾಥ­ಮಿಕ ಶಾಲೆ ಮತ್ತು ಕುಮಾರಸ್ವಾಮಿ ಬಡಾ­­ವಣೆಯ ವಿದಾತ  ಹಿರಿಯ ಪ್ರಾಥ­ಮಿಕ ಶಾಲೆಗಳು ಕ್ರಮವಾಗಿ 2 ಮತ್ತು 3 ನೇ ಸ್ಥಾನಕ್ಕೆ ಆಯ್ಕೆಯಾಗಿವೆ. ಈ ಶಾಲೆಗಳೂ ಸೇರಿದಂತೆ 10 ಶಾಲೆಗಳಿಗೆ ‘ಹಸಿರು ಶಾಲೆ’ ಪ್ರಶಸ್ತಿ ಮತ್ತು ರೂ. 2 ಸಾವಿರ ನಗದು ಬಹುಮಾನ ನೀಡಲಾ­ಯಿತು. 10 ಶಾಲೆಗಳಿಗೆ ‘ಕಿತ್ತಳೆ ಶಾಲೆ’ ಮತ್ತು ರೂ. 1 ಸಾವಿರ ನಗದು ಪುರಸ್ಕಾರ ನೀಡಲಾಯಿತು.

ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್ ಮೊಹಸಿನ್, ‘ನನಸಾದ ಕನಸು’ ಸ್ಮರಣ ಸಂಚಿಕೆ ಬಿಡು­ಗಡೆ ಮಾಡಿದರು.
ಕಾರ್ಯಕ್ರಮದಲ್ಲಿ  ‘ಗ್ರೀನ್ ವಿಕೆಟ್’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಗ್ರೀನ್ ವಿಕೆಟ್‌ನ ಸಂಚಾಲಕಿ ಮತ್ತು ಪರಿಸರ ಅಧಿಕಾರಿ ವಿಜಿ ಕಾರ್ತಿಕೇಯನ್ ಮಾತನಾಡಿ, ‘ನಗರದ ಕ್ರೀಡಾಂಗಣ­ಗಳನ್ನು ಹೆಚ್ಚು ಪರಿಸರ ಸ್ನೇಹಿಯಾಗಿ­ಸುವ ಕಾರ್ಯಕ್ರಮವಿದು. ಕ್ರಿಕೆಟಿಗರು, ಕ್ರೀಡಾ­ಪಟುಗಳು ಕಾರ್ಯಕ್ರಮದ ಸಲಹಾ ಮಂಡಳಿಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಗ್ರೀನ್‌ ವಿಕೆಟ್‌ ಅನ್ನು ರಾಜ್ಯದ 8 ಜಿಲ್ಲೆಗಳ ಶಾಲೆಗಳಿಗೆ ವಿಸ್ತರಿಸಲಾಗುವುದು’ ಎಂದು ಹೇಳಿದರು.

‘ಮಳೆ ನೀರು ಸಂಗ್ರಹಣೆ, ಸೋಲಾರ್ ವಿದ್ಯುತ್ ಉತ್ಪಾದನೆ, ತ್ಯಾಜ್ಯ ಮತ್ತು ಬಳಸಿದ ನೀರಿನ  ನಿರ್ವಹಣೆ ಮತ್ತು ಮರು­­ಬಳಕೆಗೆ ಉತ್ತೇಜನ ನೀಡುವುದು ಕಾರ್ಯ­ಕ್ರಮದ ಉದ್ದೇಶ’ ಎಂದರು. ಪರಿಸರ ಅಧ್ಯಯನ ಕೇಂದ್ರದ ಅಧ್ಯಕ್ಷ ಜಿ.ಎನ್. ಜನಾ­ರ್ಧನ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.