ಬೆಂಗಳೂರು: ‘ಕೆಂಪೇಗೌಡ ಸ್ಮಾರಕ ವಸ್ತು ಸಂಗ್ರಹಾಲಯವನ್ನು ತಾತ್ಕಾಲಿಕವಾಗಿ ಮೆಯೋಹಾಲ್ನ ಕಟ್ಟಡದಲ್ಲಿ ಏಪ್ರಿಲ್ 7ರಂದು ಉದ್ಘಾಟಿಸಲು ನಿರ್ಧರಿಸಲಾಗಿದೆ’ ಎಂದು ಮೇಯರ್ ಎಸ್.ಕೆ. ನಟರಾಜ್ ತಿಳಿಸಿದರು.ನಗರದಲ್ಲಿ ಗುರುವಾರ ನಡೆದ ಉದ್ಘಾಟನಾ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಸಂಗ್ರಹಾಲಯವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಲಿದ್ದಾರೆ ಎಂದರು.
ಕೆಂಪೇಗೌಡ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸಬೇಕೆಂದು 2000ರಲ್ಲಿ ನಿರ್ಧರಿಸಲಾಗಿತ್ತು. ಆದರೆ ನಾನಾ ಕಾರಣಗಳಿಂದಾಗಿ ಕಾಮಗಾರಿ ವಿಳಂಬವಾಯಿತು. ಈಗ ಸಾಹಿತಿ ದೇ.ಜವರೇಗೌಡರು ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಅವರ ಅವಿರತ ಪ್ರಯತ್ನದ ಫಲವಾಗಿ ಉದ್ಘಾಟನೆಗೆ ಕಾಲ ಕೂಡಿ ಬಂದಿದೆ ಎಂದು ಪ್ರಶಂಸಿಸಿದರು.
ಶಾಶ್ವತ ನೆಲೆಗೆ ಕ್ರಮ: ವಸ್ತು ಸಂಗ್ರಹಾಲಯವನ್ನು ಶಾಶ್ವತವಾಗಿ ಸ್ಥಾಪಿಸಲು ಸೂಕ್ತ ಸ್ಥಳವನ್ನು ಹುಡುಕಲಾಗುತ್ತಿದೆ.ಮಲ್ಲೇಶ್ವರದ ಬಳಿ ಸುಮಾರು ಆರು ಎಕರೆ ಜಾಗ ಇರುವುದಾಗಿ ತಿಳಿದುಬಂದಿದ್ದು, ಈ ಸಂಬಂಧ ಪರಿಶೀಲಿಸಲು ತೀರ್ಮಾನ ಕೈಗೊಳ್ಳಲಾಗುವುದು ಎಂದರು. ಪೂರ್ವ ವಲಯದ ಜಂಟಿ ಆಯುಕ್ತರಾದ ಶಿವಶಂಕರ್, ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ, ಬಿ. ಗಣೇಶ್, ಪಾಲಿಕೆ ಸದಸ್ಯರಾದ ಗೀತಾ ಶ್ರಿನಿವಾಸ್ ರೆಡ್ಡಿ, ಶಿವಕುಮಾರ್ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.