ಬೆಂಗಳೂರು: `ಕಲ್ಪನೆಗಳ ಆಧಾರದ ಮೇಲೆ ರಚನೆಗೊಂಡ ಯಾವುದೇ ಸಾಹಿತ್ಯ ಕೃತಿಗಳು ಹೆಚ್ಚು ದಿನ ಜನಮಾನಸದಲ್ಲಿ ಉಳಿಯಲಾರವು. ಸಾಹಿತ್ಯವನ್ನು ರಚಿಸುವ ಸಂದರ್ಭದಲ್ಲಿ ಲೇಖಕಿಯರು ವಾಸ್ತವಕ್ಕೆ ಹೆಚ್ಚು ಒತ್ತು ನೀಡಬೇಕು~ ಎಂದು ಇನ್ಫೊಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಸಲಹೆ ನೀಡಿದರು.
ಕರ್ನಾಟಕ ಲೇಖಕಿಯರ ಸಂಘವು ನಗರದಲ್ಲಿ ಭಾನುವಾರ ಆಯೋಜಿಸಿದ್ದ 33ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
`ಮನೆ ನಿರ್ವಹಣೆಯ ಜತೆಯಲ್ಲಿ ಲೇಖಕಿಯರು ಸಾರಸ್ವತ ಲೋಕಕ್ಕೆ ತಮ್ಮನ್ನು ಸಮರ್ಪಕವಾಗಿ ಅರ್ಪಿಸಿಕೊಳ್ಳುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ. ಪ್ರಸ್ತುತ ದಿನಗಳಲ್ಲಿ ಲೇಖಕಿಯರ ಸಂಖ್ಯೆ ದ್ವಿಗುಣಗೊಳ್ಳಬೇಕಿದೆ~ ಎಂದು ಹೇಳಿದರು.
`ಹೆಣ್ಣು ಮಕ್ಕಳು ತುಸು ಹೆಚ್ಚು ಭಾವಜೀವಿಗಳಾಗಿರುತ್ತಾರೆ. ವೃತ್ತಿಯನ್ನು ನಿರ್ವಹಿಸುವಾಗಲೂ ಭಾವನೆಗಳ ತಾಕಲಾಟವನ್ನು ಅನುಭವಿಸುತ್ತಾರೆ. ಹಾಗಾಗಿ ಗಂಡಿನಂತೆ ಹೆಣ್ಣು ಕೂಡ ಹೆಚ್ಚಿನ ಪ್ರಮಾಣದಲ್ಲಿ ವೃತ್ತಿಪರತೆಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ~ ಎಂದರು.
ಹಿರಿಯ ವಕೀಲೆ ಹೇಮಲತಾ ಮಹಿಷಿ, `ಲೇಖಕಿಯರ ಸಂಘದ ಮೂಲಕ ಅನೇಕ ಲೇಖಕಿಯರು ಸಾಹಿತ್ಯ ಲೋಕದಲ್ಲಿ ಗುರುತಿಸಿಕೊಂಡಿದ್ದಾರೆ. ಮಹಿಳೆಯರ ಲೇಖನಕ್ಕೆ ಪ್ರಾಶಸ್ತ್ಯ ದೊರಕುತ್ತಿದ್ದ ಸಂದರ್ಭದಲ್ಲಿ ಹುಟ್ಟಿಕೊಂಡ ಸಂಘವು, ಲೇಖಕಿಯರ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದೆ~ ಎಂದು ಹೇಳಿದರು.
ಲೇಖಕಿ ಬಿ.ಕೆ.ಸರೋಜಾ ಅವರ `ಅಪೂರ್ವ ಮಿಲನ~ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಎಚ್.ಎಸ್.ಪಾರ್ವತಿ ದತ್ತಿನಿಧಿ ಪ್ರಶಸ್ತಿಯನ್ನು ಹೇಮಲತಾ ಮಹಿಷಿ ಅವರಿಗೆ ಪ್ರದಾನ ಮಾಡಲಾಯಿತು.
ಲೇಖಕಿಯರಾದ ಎಲ್.ವಿ.ಶಾಂತಕುಮಾರಿ, ಡಾ.ಎನ್.ಎಸ್.ಲೀಲಾ, ಪ್ರೊ.ಬಿ.ವೈ.ಲಲಿತಾಂಬ, ಟಿ.ಗಿರಿಜಾ ಮತ್ತು ರಜಿಯಾ ಬಳಬಟ್ಟಿ ಅವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಲೇಖಕಿ ಡಾ.ಎನ್.ಗಾಯಿತ್ರಿ ಇತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.