ವಜಾಕ್ಕೆ ಪರಿಷತ್ ಪಟ್ಟು
ಬೆಂಗಳೂರು: `ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಮಹೇಶಪ್ಪ ಅವರನ್ನು ವಜಾ ಮಾಡುವಂತೆ ಆಗ್ರಹಿಸಿ ಹಾಗೂ ಈ ವಿಚಾರದಲ್ಲಿ ರಾಜ್ಯಪಾಲರ ನಿರ್ಲಿಪ್ತ ಧೋರಣೆಯನ್ನು ಖಂಡಿಸಿ ಇದೇ ಗುರುವಾರ (ಏ.5) ರಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ರಾಜಭವನ್ ಚಲೋಗೆ ಕರೆನೀಡಿದೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾರ್ಯದರ್ಶಿ ಕೆ.ರಮೇಶ್, `ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಏ.7 ರಂದು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು~ ಎಂದರು.
`ರಾಜ್ಯ ಹೈಕೋರ್ಟ್ ರಾಜ್ಯಪಾಲರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರೂ ಇದುವರೆಗೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ. ಇದು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿದೆ~ ಎಂದು ಹೇಳಿದರು.
`ಇದೇ ಸಂದರ್ಭದಲ್ಲಿ ವಿಶ್ರಾಂತ ಕುಲಪತಿಗಳಾದ ಮಹಿಳಾ ವಿಶ್ವವಿದ್ಯಾಲಯದ ಡಾ.ಸಯೀದಾ ಅಖ್ತರ್, ರಾಜೀವ್ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಡಾ.ಪ್ರಭಾಕರನ್, ಮೈಸೂರು ವಿಶ್ವವಿದ್ಯಾಲಯದ ಡಾ.ಶಶಿಧರ ಪ್ರಸಾದ್ ಅವರ ಭ್ರಷ್ಟತೆಯ ತನಿಖಾ ವರದಿಯನ್ನು ಬಹಿರಂಗಗೊಳಿಸುವಂತೆ ಆಗ್ರಹಿಸಲಾಗುವುದು~ ಎಂದು ಹೇಳಿದರು.
`ಎಂಜಿನಿಯರಿಂಗ್, ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸ್ನಾತಕೋತ್ತರ ಪದವಿಯ ಪ್ರವೇಶ ಶುಲ್ಕವನ್ನು ಸರ್ಕಾರವು ಶೇ 10 ರಷ್ಟು ಹೆಚ್ಚಳ ಮಾಡಿರುವುದರಿಂದ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪದವಿಗಳು ಗಗನ ಕುಸುಮಗಳಾಗಲಿವೆ~ ಎಂದು ಸರ್ಕಾರದ ನೀತಿಯನ್ನು ಖಂಡಿಸಿದರು. `ಕಾಮೆಡ್-ಕೆ ಯನ್ನು ಕೂಡಲೇ ರದ್ದುಗೊಳಿಸಿ, ಸರ್ಕಾರದ ಮುಖಾಂತರವೇ ಸಿಇಟಿ ಪರೀಕ್ಷೆಗಳನ್ನು ನಡೆಸಿ ಎಲ್ಲ ವೈದ್ಯಕೀಯ ಸೀಟುಗಳನ್ನು ಸರ್ಕಾರವೇ ಭರ್ತಿ ಮಾಡಿಕೊಳ್ಳಬೇಕು~ ಎಂದು ಒತ್ತಾಯಿಸಿದರು.
ಅಹಿಂದ ಪ್ರತಿಪಟ್ಟು
ಬೆಂಗಳೂರು: `ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಮಹೇಶಪ್ಪ ಅವರ ವಿರುದ್ಧ ಮಾಡುತ್ತಿರುವ ತೇಜೋವಧೆಯನ್ನು ಈ ಕೂಡಲೇ ನಿಲ್ಲಿಸಬೇಕು. ಹಾಗೂ ಈಗ ಕೈಗೊಂಡಿರುವ ಪ್ರತಿಭಟನೆಯನ್ನು ಕೈ ಬಿಡಬೇಕು~ ಎಂದು ಅಹಿಂದ ಪ್ರಗತಿಪರ ಸಂಘಟನೆಗಳ ಒಕ್ಕೂಟವು ಒತ್ತಾಯಿಸಿದೆ.
ಒಕ್ಕೂಟದ ಅಧ್ಯಕ್ಷ ಚಂದ್ರಪ್ಪ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, `ರಾಜ್ಯಪಾಲರು ತನಿಖೆಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ತನಿಖೆಯು ಪ್ರಗತಿಯಲ್ಲಿರುವಾಗಲೇ ಎಬಿವಿಪಿ ಸಂಘಟನೆಗಳು ಡಾ.ಮಹೇಶಪ್ಪ ಅವರ ಮೇಲೆ ಆರೋಪ ಮಾಡುವುದನ್ನು ಖಂಡಿಸುತ್ತೇವೆ~ ಎಂದರು.
`ತನಿಖೆಯ ವರದಿ ಬಂದ ನಂತರ ಆರೋಪದಲ್ಲಿ ಹುರುಳಿದೆಯೋ ಅಥವಾ ಇಲ್ಲವೋ ಎಂಬುದು ತಿಳಿಯುತ್ತದೆ. ನ್ಯಾಯ ಎಲ್ಲರಿಗೂ ಒಂದೇ ಇರುತ್ತದೆ. ತನಿಖೆಯ ವರದಿಗೆ ಎಲ್ಲರೂ ತಲೆಬಾಗಲೇಬೇಕು~ ಎಂದು ಹೇಳಿದರು.
`ಬಾಲವೀರರೆಡ್ಡಿ ಅವರು ಕುಲಪತಿಗಳಾಗಿದ್ದಾಗ ತಮ್ಮ ಅಧಿಕಾರ ಅವಧಿಯಲ್ಲಿ ಸಾಕಷ್ಟು ಅವ್ಯವಹಾರಗಳನ್ನು ಮಾಡಿದ್ದಾರೆ. ಆಗ ಎಬಿವಿಪಿ ಸಂಘಟನೆಗಳು ಅವರ ಬಗ್ಗೆ ಚಕಾರ ಎತ್ತಲಿಲ್ಲ. ಈಗ ಹಿಂದುಳಿದ ವರ್ಗದಿಂದ ಬಂದಂತಹ ವ್ಯಕ್ತಿಯನ್ನು ಈ ರೀತಿ ಶೋಷಿಸುವುದು ಸರಿಯಲ್ಲ~ ಎಂದು ಹೇಳಿದರು.
`ಎಬಿವಿಪಿ ಸಂಘಟನೆಗಳು ಇನ್ನು ಮುಂದೆ ಹೇಳಿಕೆ ನೀಡುವುದಾಗಲೀ ಅಥವಾ ಪ್ರತಿಭಟನೆ ಕೈಗೊಳ್ಳುವುದಾದರೆ, ಅವರ ವಿರುದ್ಧ ಅಹಿಂದ ಪ್ರಗತಿಪರ ಸಂಘಟನೆಗಳು ಉಗ್ರವಾದ ಹೋರಾಟ ನಡೆಸುತ್ತವೆ~ ಎಂದು ಎಚ್ಚರಿಸಿದರು.
ಗೋಷ್ಠಿಯಲ್ಲಿ ಕುರುಬರ ಸೇನೆಯ ರಾಜ್ಯಾಧ್ಯಕ್ಷ ಸತ್ಯಪ್ರಕಾಶ್, ಕುರುಬರ ಸೇನೆಯ ಜಿಲ್ಲಾಧ್ಯಕ್ಷ ಗುರು ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.