ADVERTISEMENT

ವಿಶ್ವಶಾಂತಿಗಾಗಿ ಜಾಗೃತಿ ನಡಿಗೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2012, 19:59 IST
Last Updated 23 ಡಿಸೆಂಬರ್ 2012, 19:59 IST

ಬೆಂಗಳೂರು: ಯೋಗ ಗುರುಗಳು, ಆಧ್ಯಾತ್ಮಿಕ ನಾಯಕರು, ಆಯುರ್ವೇದ ಪರಿಣಿತರ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು, ಸ್ವಯಂ ಸೇವಕರು ಮತ್ತು ಸಾಂಸ್ಕೃತಿಕ ತಂಡಗಳು ವಿಶ್ವಶಾಂತಿಗಾಗಿ ಭಾನುವಾರ ನಗರದ ಯಲಹಂಕದಿಂದ ಅಲ್ಲಾಳಸಂದ್ರದವರೆಗೆ ಜಾಗೃತಿ ನಡಿಗೆಯನ್ನು ಕೈಗೊಂಡರು.

ನಗರದ ಸ್ವಾಮಿ ವಿವೇಕಾನಂದ ಯೋಗ ರೀಸರ್ಚ್ ಅಂಡ್ ಹೋಲಿಸ್ಟಿಕ್ ಸಂಸ್ಥೆ ಮತ್ತು ಚೆನ್ನೈನ ರಾಮಾನುಜ ಮಿಷನ್ ಟ್ರಸ್ಟ್ ವತಿಯಿಂದ ನಗರದಲ್ಲಿ ಜನವರಿ 6ರಂದು ನಡೆಯಲಿರುವ ಅಂತರರಾಷ್ಟ್ರೀಯ ಯೋಗ, ಆಯುರ್ವೇದ ಮತ್ತು ಆಧ್ಯಾತ್ಮ ಸಮಾವೇಶದ ಅಂಗವಾಗಿ ನಡಿಗೆಯನ್ನು ಆಯೋಜಿಸಲಾಗಿತ್ತು.

ಶಾಸಕ ಎಸ್.ಆರ್.ವಿಶ್ವನಾಥ್, ಪಾಲಿಕೆ ಸದಸ್ಯ ಮುನಿರಾಜು ಮತ್ತು ನಟಿ ಪಾರ್ವತಿ ನಾಯರ್ ಯಲಹಂಕದ ಎಂ.ಇ.ಸಿ.ಪ್ರೌಢಶಾಲಾ ಆವರಣದಲ್ಲಿ ನಡಿಗೆಗೆ ಚಾಲನೆ ನೀಡಿದರು.

ಅಂತರರಾಷ್ಟ್ರೀಯ ಯೋಗ, ಆಯುರ್ವೇದ ಮತ್ತು ಆಧ್ಯಾತ್ಮ ಸಮಿತಿಯ ಸಂಘಟನಾ ಕಾರ್ಯದರ್ಶಿ ಯೋಗಿ ದೇವರಾಜ್ ಮಾತನಾಡಿ, `ವೇಗದ ನಗರ ಜೀವನಶೈಲಿಯು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ನಾಶಮಾಡುತ್ತಿದೆ. ಆಂತರಿಕ ಶಾಂತಿ ಮತ್ತು ಸಮಗ್ರ ಅಭಿವೃದ್ಧಿಗೆ ಪಾಶ್ಚಿಮಾತ್ಯ ರಾಷ್ಟ್ರಗಳು ಯೋಗ ಮತ್ತು ಆಧ್ಯಾತ್ಮಿಕತೆಯನ್ನು ಬಳಸಿಕೊಳ್ಳುತ್ತಿದ್ದು, ದೇಶದಲ್ಲಿ ಅವುಗಳನ್ನು ನಿರ್ಲಕ್ಷಿಸಲಾಗಿತ್ತಿದೆ' ಎಂದು ಆತಂಕ ವ್ಯಕ್ತಪಸಿದರು.

ನಟಿ ಪಾರ್ವತಿ ನಾಯರ್ ಮಾತನಾಡಿ, `ವಿಶ್ವ ಶಾಂತಿಗಾಗಿ ಇಂತಹ ಕಾರ್ಯಕ್ರಮಗಳ ಆಯೋಜನೆಯ ಅಗತ್ಯವಿದೆ. ಯೋಗ, ಆಯುರ್ವೇದ ಮತ್ತು ಆಧ್ಯಾತ್ಮಿಕತೆಯನ್ನು ಜನರು ಜೀವನ ಮೌಲ್ಯಗಳಾಗಿ ಅಳವಡಿಸಿಕೊಳ್ಳಬೇಕು' ಮನವಿ ಮಾಡಿದರು.

ನಡಿಗೆಯ ಅಂಗವಾಗಿ ನಗರದ ಪ್ರಮುಖ ವೃತ್ತಗಳಲ್ಲಿ ಯೋಗಾಸನ, ವಿವಿಧ ಸಾಂಸ್ಕೃತಿಕ ತಂಡಗಳಿಂದ ಕಲಾ ಪ್ರದರ್ಶನ ಮತ್ತು ವಿಶ್ವ ಶಾಂತಿ ಸಾರುವ ಘೋಷಣೆಗಳನ್ನು ಕೂಗಿದರು. ಪಾಲಿಕೆ ಸದಸ್ಯೆ ಗೀತಾ ಶಶಿಕುಮಾರ್, ಎಂ.ಇ.ಸಿ. ಪ್ರೌಢಶಾಲೆಯ ಆಡಳಿತಾಧಿಕಾರಿ ವಿದ್ಯಾ, ಐಸಿವೈಎಎಸ್ ಸಮಿತಿ ಸದಸ್ಯರಾದ ಕೃಷ್ಣ ಗುರೂಜಿ ಮತ್ತು ಮಂಜುನಾಥ ಸ್ವಾಮಿ ಮತ್ತಿತರರು ನಡಿಗೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.