ADVERTISEMENT

ವೃದ್ಧರ ಸಹಾಯವಾಣಿಗೆ ದೂರುಗಳ ಮಹಾಪೂರ

​ಪ್ರಜಾವಾಣಿ ವಾರ್ತೆ
Published 7 ಜೂನ್ 2013, 19:47 IST
Last Updated 7 ಜೂನ್ 2013, 19:47 IST

ಬೆಂಗಳೂರು: ಒಂದೂವರೆ ವರ್ಷದಿಂದ ಗೃಹಬಂಧನದಲ್ಲಿದ್ದ ಅನಂತಯ್ಯಶೆಟ್ಟಿ (93) ಎಂಬುವರನ್ನು ಪೊಲೀಸರು ರಕ್ಷಿಸಿದ ನಂತರ ವೃದ್ಧರ ಸಹಾಯವಾಣಿಗೆ (1090) ದೂರುಗಳ ಮಹಾಪೂರವೇ ಹರಿದು ಬರುತ್ತಿವೆ.

`ವೃದ್ಧರ ನೆರವಿಗೂ ಸಹಾಯವಾಣಿ ಕೇಂದ್ರವಿದೆ ಎಂಬ ಬಗ್ಗೆ ಸಾರ್ವಜನಿಕರಲ್ಲಿ ಅರಿವಿಲ್ಲ. ಅಧ್ಯಯನದ ಪ್ರಕಾರ ನಗರದಲ್ಲಿ ಶೇ 40ರಷ್ಟು ವೃದ್ಧರು ಬೇರೆ ಬೇರೆ ಕಾರಣಗಳಿಂದ ಕಿರುಕುಳಕ್ಕೆ ಒಳಗಾಗುತ್ತಿದ್ದಾರೆ.

ಅಲ್ಲದೇ, ಕೌಟುಂಬಿಕ ಸಮಸ್ಯೆ, ಆಸ್ತಿ ವಿಚಾರ ಸೇರಿದಂತೆ ವಿವಿಧ ಕಾರಣಗಳಿಂದ ಮಕ್ಕಳಿಂದಲೇ ಹಿಂಸೆ ಅನುಭವಿಸುತ್ತಿರುವ ವೃದ್ಧರ ಸಂಖ್ಯೆ ಶೇ,57ರಷ್ಟಿದೆ. ಅನಂತಯ್ಯಶೆಟ್ಟಿ ಪ್ರಕರಣದ ನಂತರ ಪ್ರತಿನಿತ್ಯ 35 ರಿಂದ 45 ವೃದ್ಧರು ಸಹಾಯವಾಣಿಗೆ ಕರೆ ಮಾಡಿ ಅಳಲು ತೋಡಿಕೊಳ್ಳುತ್ತಿದ್ದಾರೆ' ಎಂದು ಸಹಾಯವಾಣಿಯ ವ್ಯವಸ್ಥಾಪಕ ಟ್ರಸ್ಟಿ ಡಾ.ರಾಧಾ ಎಸ್. ಮೂರ್ತಿ ತಿಳಿಸಿದರು.

ನಗರ ಪೊಲೀಸರು ಮತ್ತು ನೈಟಿಂಗಲ್ ವೈದ್ಯಕೀಯ ಸಂಸ್ಥೆ ಜಂಟಿಯಾಗಿ 2002ರಲ್ಲಿ ವೃದ್ಧರ ಸಹಾಯವಾಣಿಯನ್ನು ಆರಂಭಿಸಿದವು. ಈವರೆಗೆ 7,133 ವೃದ್ಧರು ಸಹಾಯವಾಣಿಗೆ ಕರೆ ಮಾಡಿ ದೂರುಗಳನ್ನು ದಾಖಲಿಸಿದ್ದಾರೆ. ಈ ಪೈಕಿ ಸೂಕ್ತ ಸಮಾಲೋಚನೆ ಮೂಲಕ 3,545 ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥ ಮಾಡಲಾಗಿದೆ ಎಂದರು.

`ವೃದ್ಧರ ದೂರುಗಳನ್ನು ಆಧರಿಸಿ, ಕಿರುಕುಳ ನೀಡುತ್ತಿರುವ ವ್ಯಕ್ತಿಗಳನ್ನು ಶಿವಾಜಿನಗರದಲ್ಲಿರುವ ಸಹಾಯವಾಣಿ ಕಚೇರಿಗೆ ಕರೆಸಲಾಗುವುದು.

ದೂರುದಾರರ ಸಮ್ಮುಖದಲ್ಲೇ ಅವರೊಂದಿಗೆ ಸಮಾಲೋಚನೆ ನಡೆಸಿ ತಿಳುವಳಿಕೆ ನೀಡಲಾಗುವುದು. ಆ ನಂತರವೂ ಕಿರುಕುಳ ಮುಂದುವರಿದರೆ ಪೊಲೀಸರ ನೆರವು ಪಡೆದು ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಸಹಾಯವಾಣಿಯ ಸಮಾಲೋಚಕಿ ಸಂಧ್ಯಾ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.