ADVERTISEMENT

ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸಲು ಕೋರಿಕೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2011, 19:30 IST
Last Updated 29 ಅಕ್ಟೋಬರ್ 2011, 19:30 IST

ಬೆಂಗಳೂರು: `ದೇಶದಲ್ಲಿ ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳ ಶಾಲೆಗಳಲ್ಲಿ ಭಗವದ್ಗೀತೆ ಬೋಧಿಸಲು ಆಯಾ ರಾಜ್ಯ ಸರ್ಕಾರಗಳ ಒಪ್ಪಿಗೆ ಕೋರಲಾಗಿದೆ~ ಎಂದು ಕಂಚಿ ಕಾಮಕೋಟಿ ಮಠದ ಜಯೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.

ಭಗವದ್ಗೀತಾ ಅಭಿಯಾನ ಕರ್ನಾಟಕ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ಭಗವದ್ಗೀತೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

 `ಬಿಜೆಪಿ ಆಡಳಿತವಿರುವ ಮಧ್ಯಪ್ರದೇಶದಲ್ಲಿ ಮಾತ್ರ ಶಾಲೆಗಳಲ್ಲಿ ಭಗವದ್ಗೀತೆ ಬೋಧನೆ ನಡೆಯುತ್ತಿದೆ. ಇದಕ್ಕೆ ಆ ಪಕ್ಷದ ಆಡಳಿತವಿರುವ ಇತರೆ ರಾಜ್ಯಗಳು ಕೂಡ ಅನುಮತಿ ನೀಡಬೇಕು~ ಎಂದು ಅವರು ಮನವಿ ಮಾಡಿದರು.
`ಅನೇಕ ಸಮುದಾಯಗಳು ಧಾರ್ಮಿಕ ಶಾಲೆಗಳಲ್ಲಿ ತಮ್ಮ ತಮ್ಮ ಧರ್ಮಗ್ರಂಥಗಳ ಬಗ್ಗೆ ಬೋಧಿಸುತ್ತಿವೆ. ಅದೇ ಮಾದರಿ ಭಗವದ್ಗೀತೆಯನ್ನು ಕೂಡ ಎಲ್ಲ ಶಾಲೆಗಳಲ್ಲಿ ಬೋಧಿಸುವಂತಾಗಬೇಕು~ ಎಂದರು.

ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ವ್ಯಕ್ತಿತ್ವ ವಿಕಸನ, ನೈತಿಕ ಶಿಕ್ಷಣ, ರಾಷ್ಟ್ರೀಯ ಭಾವೈಕ್ಯತೆ ಹಾಗೂ ಸಾಮಾಜಿಕ ಸಾಮರಸ್ಯ ಅಂಶಗಳ ಆಧಾರದ ಮೇಲೆ ಅಭಿಯಾನ ಪ್ರಾರಂಭಿಸಲಾಯಿತು. 2007ರಲ್ಲಿ ಆರಂಭಗೊಂಡ ಭಗವದ್ಗೀತಾ ಅಭಿಯಾನವು ನಾಲ್ಕು ವರ್ಷಗಳನ್ನು ಪೂರೈಸಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ಈ ಅಭಿಯಾನ ಕೇವಲ ಹಿಂದೂಗಳಿಗಷ್ಟೇ ಸೀಮಿತವಾಗದೇ ಜಗತ್ತಿನ ಎಲ್ಲಾ ಧರ್ಮಗಳಲ್ಲಿ ಭಗವದ್ಗೀತೆ ಬಗ್ಗೆ ಅಭಿಮಾನ ಮೂಡಿಸುವ ಉದ್ದೇಶವನ್ನು ಹೊಂದಿದೆ ಎಂದು ಅವರು ತಿಳಿಸಿದರು.

ಗೃಹ ಹಾಗೂ ಸಾರಿಗೆ ಸಚಿವ ಆರ್. ಅಶೋಕ, `ಪರಕೀಯರ ದಾಳಿಗಳು ನಮ್ಮನ್ನು ನಲುಗಿಸಿದರೂ ಪುನಃ ಎದ್ದು ನಿಲ್ಲುವಂತೆ ಮಾಡಿದ್ದು ನಮ್ಮ ಧರ್ಮ, ಪರಂಪರೆ ಮತ್ತು ಸಂಸ್ಕೃತಿ. ಈ ನಿಟ್ಟಿನಲ್ಲಿ ಭಗವದ್ಗೀತೆ ಅಭಿಯಾನವನ್ನು ನಡೆಸುತ್ತಿರುವುದು ಅತ್ಯಂತ ಹೆಮ್ಮೆಯ ವಿಷಯವಾಗಿದೆ~ ಎಂದು ಅಭಿಪ್ರಾಯಪಟ್ಟರು.

ಇದೇ ಸಂದರ್ಭದಲ್ಲಿ ಭಗವದ್ಗೀತಾ ಅಭಿಯಾನದ ಬಗ್ಗೆ ಸಂಪೂರ್ಣ ಮಾಹಿತಿಯುಳ್ಳ ಅಂತರ್ಜಾಲ ಹಾಗೂ ಸ್ವಯಂಪ್ರಕಾಶ ಸಚ್ಚಿದಾನಂದ ಸ್ವಾಮೀಜಿಯವರ `ಗೀತಾಂತರಂಗ~ ಕೃತಿಯನ್ನು ಲೋಕಾರ್ಪಣೆ ಮಾಡಲಾಯಿತು.

ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ, ಸ್ವಯಂಪ್ರಕಾಶ ಸಚ್ಚಿದಾನಂದ ಸ್ವಾಮೀಜಿ, ಚಿನ್ಮಯ ಮಿಷನ್‌ನ ಬ್ರಹ್ಮಾನಂದಜಿ, ಭಗವದ್ಗೀತಾ ಅಭಿಯಾನ ರಾಜ್ಯ ಸಮಿತಿಯ ಗೌರವಾಧ್ಯಕ್ಷ ನ್ಯಾ.ಡಾ.ಎಂ.ರಾಮಾಜೋಯಿಸ್, ಶಾಸಕರಾದ ಎಂ.ಕೃಷ್ಣಪ್ಪ, ಎಲ್.ಎ.ರವಿ ಸುಬ್ರಹ್ಮಣ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.