ADVERTISEMENT

ಶಿಕ್ಷಕರು ಗುಣಾತ್ಮಕ ಶಿಕ್ಷಣ ನೀಡಬೇಕು

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2012, 19:30 IST
Last Updated 4 ಏಪ್ರಿಲ್ 2012, 19:30 IST

ಕೃಷ್ಣರಾಜಪುರ: `ಶಾಲಾಭಿವೃದ್ಧಿ ಮಂಡಳಿ ಸದಸ್ಯರು ಮತ್ತು ಸಮುದಾಯದ ನೆರವಿನಿಂದ ಸರ್ಕಾರಿ ಶಾಲೆಗಳು ಪ್ರಗತಿ ಸಾಧಿಸಿವೆ. ಈ ಸಮಾವೇಶದಲ್ಲಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವುದನ್ನು ಶಿಕ್ಷಕರು ಸವಾಲಾಗಿ ಸ್ವೀಕರಿಸಲು ಪಣ ತೊಡಬೇಕು~ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ನಂಜುಂಡಯ್ಯ ಕರೆ ನೀಡಿದರು.

ತ್ರಿವೇಣಿ ನಗರ ಕ್ಷೇತ್ರ ಸಂಪನ್ಮೂಲ ಕಚೇರಿ ಆವರಣದಲ್ಲಿ ನಡೆದ ತಾಲ್ಲೂಕು ಮಟ್ಟದ ಸರ್ಕಾರಿ ಶಾಲೆಗಳ ಅಭಿವೃದ್ಧಿ ಮಂಡಳಿ (ಎಸ್‌ಡಿಎಂಸಿ) ಸದಸ್ಯರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಶಾಲೆಗೆ ಮೂಲ ಸೌಕರ್ಯ ಒದಗಿಸುವುದು, ಮಕ್ಕಳ ದಾಖಲಾತಿ ಖಾತರಿ ಪಡಿಸುವುದು, ಶೈಕ್ಷಣಿಕ ಪರಿಸರ ನಿರ್ಮಾಣ ಮತ್ತು ಕಲಿಕೆಯ ಗುಣ ಮಟ್ಟ ಸುಧಾರಣೆ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು~ ಎಂದು ಅವರು ಸಲಹೆ ನೀಡಿದರು.

ಎಸ್‌ಡಿಎಂಸಿ ಅಧ್ಯಕ್ಷರನ್ನು ಸನ್ಮಾನಿಸಿ ಮಾತನಾಡಿದ ಪಾಲಿಕೆ ಸದಸ್ಯೆ ಆರ್.ಮಂಜುಳಾದೇವಿ, `ನನ್ನ ವಾರ್ಡ್ ವ್ಯಾಪ್ತಿಯಲ್ಲಿ ನಾಲ್ಕು ಶಾಲೆಗಳಿವೆ. ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸಿ ಮಾಹಿತಿ ನೀಡಿದರೆ ಓದು ಮುಂದುವರೆಸಲು ಎಲ್ಲ ರೀತಿಯ ನೆರವು ಒದಗಿಸಲಾಗುವುದು~ ಎಂದು ಭರವಸೆ ನೀಡಿದರು.

ತಾಲ್ಲೂಕು ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಹರಿಪ್ರಸಾದ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಆರ್.ಶಿವಕುಮಾರ್, ಮಹದೇವಗೌಡ ಮಾತನಾಡಿದರು. ವಿವಿಧ ಎಸ್‌ಡಿಎಂಸಿ ಅಧ್ಯಕ್ಷರಾದ ವಿ.ಟಿ.ಬಿ. ಬಾಬುರೆಡ್ಡಿ, ಸುರೇಶ್, ಕೆಂಪಯ್ಯ, ಜನಾರ್ದನರೆಡ್ಡಿ, ಹೇಮಂತ್ ಕುಮಾರ್, ಎನ್.ವೆಂಕಟಪ್ಪ, ಕಾಂತರಾಜು, ಮುಖ್ಯ ಶಿಕ್ಷಕಿ ಎ.ಎಂ ಉಷಾ ರಾಣಿ ಮೊದಲಾದವರು ಉಪಸ್ಥಿತರಿದ್ದರು. ಸಮುಹ ಸಂಪನ್ಮೂಲ ವ್ಯಕ್ತಿ ಎಂ.ಎಸ್.ಕೃಷ್ಣಪ್ಪ ಸ್ವಾಗತಿಸಿ, ಬಿ.ವಿ. ಭಾರತಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.