ಹೊಸದುರ್ಗ: ಶ್ರೀರಾಮಾನುಜಾಚಾರ್ಯರ ಜಯಂತ್ಯುತ್ಸವ ಆಚರಣೆಮಾಡದ ರಾಜ್ಯ ಸರ್ಕಾರ ವಿಧಾನಸೌಧದ ಎದುರು ಕನಕದಾಸರ ಪುತ್ಥಳಿ ನಿರ್ಮಾಣ ಮಾಡುತ್ತಿರುವುದು ಸರಿಯಲ್ಲ ಎಂದು ಬೆಂಗಳೂರಿನ ಸಂಸ್ಕೃತ ವಿದ್ವಾಂಸ ಹ.ರಾ.ನಾಗರಾಜಾಚಾರ್ಯ ದೂರಿದರು.
ಪಟ್ಟಣದ ಹುಳಿಯಾರು ರಸ್ತೆಯಲ್ಲಿರುವ ಶಿವಗಂಗಾ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀವೈಷ್ಣವ ಸಮಾವೇಶದಲ್ಲಿ ಅವರು ಮಾತನಾಡಿದರು.
‘ನಮಗೆ ದಾಸಶ್ರೇಷ್ಠರಾದ ಕನಕದಾಸರ ಬಗ್ಗೆ ಅಪಾರ ಗೌರವ ಹಾಗೂ ಭಕ್ತಿ ಇದೆ.
ಆದರೆ ಕನಕದಾಸರಿಗೆ ಸರ್ಕಾರ ತೋರಿಸುತ್ತಿರುವ ಕಾಳಜಿಯನ್ನು ಕನಕದಾಸರ ಗುರುಗಳಾದರಾಮಾನುಜಾಚಾರ್ಯರ ಬಗ್ಗೆ ಏಕೆ ತೋರಿಸುತ್ತಿಲ್ಲವೆಂದು ತಿಳಿಯುತ್ತಿಲ್ಲ. ಎಲ್ಲರ ಹಿತ ಕಾಪಾಡಬೇಕಿರುವ ಸರ್ಕಾರ ಜಾತಿವಾದ ಮಾಡುವುದು ಸರಿಯಲ್ಲ’ ಎಂದರು.
ಹಲವು ಆದರ್ಶ ವ್ಯಕ್ತಿಗಳ ಜಯಂತ್ಯುತ್ಸವ ಆಚರಿಸುತ್ತಿರುವಂತೆ, ರಾಮಾನುಜಾಚಾರ್ಯರ ಜಯಂತ್ಯುತ್ಸವವನ್ನು ಸರ್ಕಾರಿ ಆಚರಣೆಯಾಗಿ ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ಮನವಿ ಮಾಡಿಕೊಂಡಿದ್ದೇವೆ. ರಾಮಾನುಜಾಚಾರ್ಯರ ಜಯಂತ್ಯುತ್ಸವದಿಂದ ಸರ್ಕಾರಕ್ಕೆ ಗೌರವ ಬರುತ್ತದೆ ಎಂದು ಮನವರಿಕೆ ಮಾಡಿದ್ದೆವು. ಆದರೆ ಈ ಬಗ್ಗೆ ಸರ್ಕಾರ ಕಿಂಚಿತ್ತೂ ಕಾಳಜಿ ವಹಿಸದಿರುವುದು ಬೇಸರದ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಯದುರ್ಗದ ರಾಮಮೂರ್ತಿ ಸ್ವಾಮೀಜಿ ಹಾಗೂ ಶ್ರೀವೈಷ್ಣವ ಸಮಾಜದ ಮುಖಂಡರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.