ADVERTISEMENT

ಸಂಚಾರಿ ಕುರುಬರಿಗೆ ಅನಗತ್ಯ ಕಿರುಕುಳ: ಆರೋಪ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 19:30 IST
Last Updated 3 ಸೆಪ್ಟೆಂಬರ್ 2011, 19:30 IST

ಬೆಂಗಳೂರು: `ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ತುಮಕೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಗುಡ್ಡಗಾಡಿನಲ್ಲಿ ಕುರಿ ಕಾಯುತ್ತಿರುವ ಸಂಚಾರಿ ಕುರುಬರಿಗೆ ಅರಣ್ಯಾಧಿಕಾರಿಗಳು ಅನಗತ್ಯ ಕಿರುಕುಳ ನೀಡುತ್ತಿದ್ದಾರೆ~ ಎಂದು ಅಹಿಂದ ಸಂಘಟನೆಯ ಕೆ.ಮುಕುಡಪ್ಪ ಆರೋಪಿಸಿದರು.

`ಕುರಿ ಕಾಯುವ ವೃತ್ತಿಯನ್ನೇ ಜೀವನಾಧಾರವಾಗಿಸಿಕೊಂಡಿರುವ ಸಂಚಾರಿ ಕುರುಬರಿಗೆ ರಾಜ್ಯ ಸರ್ಕಾರ ಶಿಕ್ಷಣ, ಉದ್ಯೋಗ ಸೇರಿದಂತೆ ಹಲವು ಸವಲತ್ತುಗಳನ್ನು ನೀಡುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಬೇಕು~ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿಕೊಂಡರು.

ಸಂಚಾರಿ ಕುರುಬರಿಗೆ ಜೂನ್‌ನಿಂದ ನವೆಂಬರ್ ತಿಂಗಳವರೆಗೆ ಗುಡ್ಡಗಾಡಿನಲ್ಲಿ ಕುರಿ ಮೇಯಿಸಲು ಮತ್ತು ತಂಗಲು ಅನುಮತಿ ನೀಡಬೇಕು. ಹೊಲ ಮತ್ತು ಕುರಿ ಕೊಂಡುಕೊಳ್ಳಲು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಬೇಕು. ಇದಕ್ಕಾಗಿ ಪ್ರತಿವರ್ಷ ಕುರಿ ಮಂಡಳಿಗೆ 100 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಉತ್ತರ ಕರ್ನಾಟಕ ಎಲ್ಲ ಸಂಚಾರಿ ಕುರುಬರನ್ನು ಅಲೆಮಾರಿಗಳೆಂದು ಪರಿಗಣಿಸಿ ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕು. ಸಂಚಾರಿ ಕುರುಬರಿಗೆ ಪಡಿತರ ಚೀಟಿ ಮತ್ತು ಮತದಾನದ ಚೀಟಿಯನ್ನು ಕಡ್ಡಾಯವಾಗಿ ಒದಗಿಸಬೇಕು. ಕುರುಬರ ಮಕ್ಕಳಿಗಾಗಿ ಉಚಿತ ಶಿಕ್ಷಣ ನೀಡುವ ಶಾಲೆಗಳನ್ನು ತೆರೆಯಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿದರು.

ಸರ್ವಜನ ಸಮಾಜ ವೇದಿಕೆ ಅಧ್ಯಕ್ಷ ಬಿ.ಗೋಪಾಲ್, ಬೀರಲಿಂಗೇಶ್ವರ ಸಂಚಾರಿ ಕುರುಬರ ಕುರಿ ಸಾಕಣಿಕೆದಾರರ ಸಂಘದ ಅಧ್ಯಕ್ಷ ಕಲ್ಲೇಶ್ ಎಸ್.ಬಿಳಿಕುರಿ, ಕರ್ನಾಟಕ ಸಂಚಾರಿ ಕುರುಬರ ಹಿತರಕ್ಷಣಾ ವೇದಿಕೆ ಸದಸ್ಯ ವಿಠಲ ಜಿ.ಗೋಡು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.