ADVERTISEMENT

ಸಂಬಂಧಿಕರ ನಡುವೆ ಜಗಳ: ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2012, 20:10 IST
Last Updated 23 ಫೆಬ್ರುವರಿ 2012, 20:10 IST

ಬೆಂಗಳೂರು: ಪರಪ್ಪನ ಅಗ್ರಹಾರ ಸಮೀಪದ ಶಾಂತಿಪುರದಲ್ಲಿ ಸಂಬಂಧಿಕರ ನಡುವೆ ಬುಧವಾರ ರಾತ್ರಿ ನಡೆದ ಜಗಳದಲ್ಲಿ ಗಾಯಗೊಂಡಿದ್ದ ವೆಂಕಟಸ್ವಾಮಿ ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಪಾಪಯ್ಯ(35) ಬುಧವಾರ ರಾತ್ರಿಯೇ ಮೃತಪಟ್ಟಿದ್ದು, ಗಾಯಗೊಂಡಿದ್ದ ವೆಂಕಟಸ್ವಾಮಿ (55) ಬೆಳಿಗ್ಗೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಘಟನೆ ಸಂಬಂಧ ಆರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಕೊಲೆಯಾದವರ ಸಂಬಂಧಿಕರಾದ ಶಾಂತಿಪುರ ನಿವಾಸಿಗಳಾದ ದೊಡ್ಡಯ್ಯ, ರಮೇಶ್, ವಿಜಯ್‌ಕುಮಾರ್ ಪ್ರಮುಖ ಆರೋಪಿಗಳಾಗಿದ್ದು, ಅವರು ತಲೆ ಮರೆಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ಘಟನೆ ಹಿನ್ನೆಲೆ: ವೆಂಕಟಸ್ವಾಮಿ ಅವರ ಅಳಿಯ ಪಾಪಯ್ಯ ತಮ್ಮ ಮನೆಗೆ ಕಾಂಪೌಡ್ ಕಟ್ಟಿಸುತ್ತಿದ್ದರು. ಇದಕ್ಕಾಗಿ ಶಾಲಾ ನಿರ್ಮಾಣಕ್ಕೆಂದು ತಂದಿದ್ದ ಇಟ್ಟಿಗೆಗಳನ್ನು ಬಳಸುತ್ತಿದ್ದರು. ಇದರಿಂದ ಪಂಚಾಯಿತಿ ಸದಸ್ಯನಾಗಿದ್ದ ಆರೋಪಿ ರಮೇಶ್ ಕೋಪಗೊಂಡಿದ್ದಾನೆ.

ಈ ವಿಚಾರಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಆರೋಪಿ ಹಾಗೂ ಅವನ ಬೆಂಬಲಿಗರು ಪಾಪಯ್ಯ ಅವರ ಮೇಲೆ  ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಇದನ್ನು ಪ್ರಶ್ನಿಸಲು ಮುಂದಾದ ವೆಂಕಟಸ್ವಾಮಿ ಅವರ ಮೇಲೂ ಹಲ್ಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದರು.

ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದು, ಉಳಿದ ಆರೋಪಿಗಳ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.