ADVERTISEMENT

ಸಂಸದ ಡಿ.ಕೆ.ಸುರೇಶ್‌ ನಾಮಪತ್ರ ಸಲ್ಲಿಕೆ

ಎಂಟು ಕ್ರಿಮಿನಲ್‌ ಪ್ರಕರಣಗಳ ಉಲ್ಲೇಖ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2014, 19:52 IST
Last Updated 20 ಮಾರ್ಚ್ 2014, 19:52 IST

ರಾಮನಗರ: ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಡಿ.ಕೆ.ಸುರೇಶ್‌ ಅವರ ಮೇಲೆ ಅರಣ್ಯ ಕಾಯ್ದೆ, ಗಣಿ ಮತ್ತು ಖನಿಜ ಕಾಯ್ದೆ ಹಾಗೂ ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆಗಳ­ಡಿ­ಯಲ್ಲಿ  ಒಟ್ಟು ಎಂಟು ವಿವಿಧ ಪ್ರಕರಣಗಳು ಕನಕಪುರ ವ್ಯಾಪ್ತಿಯಲ್ಲಿ ದಾಖಲಾಗಿವೆ.

ಹಾಲಿ ಸಂಸದರೂ ಆಗಿರುವ ಡಿ.ಕೆ.ಸುರೇಶ್‌ ಅವರು ಗುರುವಾರ ರಾಮನಗರದ ಚುನಾವಣಾ ಅಧಿ ಕಾರಿಗೆ  ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಈ ಅಂಶಗಳನ್ನು ದಾಖಲಿಸಿದ್ದಾರೆ. 2006– 07ನೇ ಸಾಲಿನಲ್ಲಿ ಏಳು ಪ್ರಕರಣ ಹಾಗೂ 2013ರಲ್ಲಿ ಒಂದು ಪ್ರಕರಣ (ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆ) ಇವರ ವಿರುದ್ಧ ದಾಖಲಾಗಿದೆ.

ಕರ್ನಾಟಕ ಮೀಸಲು ಅರಣ್ಯ ಕಾಯ್ದೆ (1969), ಕರ್ನಾಟಕ ಅರಣ್ಯ ಕಾಯ್ದೆಯ (1963) ವಿವಿಧ ಕಲಂಗಳ ಅಡಿಯಲ್ಲಿ ಹಾಗೂ ಗಣಿ ಮತ್ತು ಖನಿಜ ಕಾಯ್ದೆ ಅಡಿಯಲ್ಲಿ ಇವರ ವಿರುದ್ಧ ಪ್ರಕರಣಗಳಿವೆ ಎಂದು ಅವರು ತಿಳಿಸಿದ್ದಾರೆ. 2013ರ ಮೇ ತಿಂಗಳಲ್ಲಿ ಕೋಡಿಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ (1989) ಪ್ರಕರಣ ದಾಖಲಾಗಿದೆ ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.

ಎಂಟು ಪ್ರಕರಣಗಳ ಪೈಕಿ ನಾಲ್ಕು ಪ್ರಕರಣಗಳ ಕುರಿತು ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ಇವುಗಳಿಗೆ ಸಂಬಂಧಿಸಿದಂತೆ ಮತ್ತೊಮ್ಮೆ ತನಿಖೆ ನಡೆಯುತ್ತಿದೆ. ಎಸ್ಸಿ–ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾಗಿರುವ ಪ್ರಕರಣದಲ್ಲಿ ಐಪಿಸಿ ಕಲಂ 143, 147, 148, 324, 427, 506, 149ರ ಅಡಿಯಲ್ಲಿ ಮೊಕದ್ದಮೆ ದಾಖಲಾಗಿದೆ. ಈ ಸಂಬಂಧ ಎಫ್‌ಐಆರ್‌ ದಾಖಲಿಸಲಾಗಿದ್ದು, ಚಾರ್ಜ್‌ಶೀಟ್‌ ಸಲ್ಲಿಕೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಆಸ್ತಿಯಲ್ಲಿ ಹೆಚ್ಚಳ: ಪ್ರಮಾಣ ಪತ್ರದಲ್ಲಿ ಆಸ್ತಿ ವಿವರ ದಾಖಲಿಸಿರುವ ಡಿ.ಕೆ.ಸುರೇಶ್‌ ಅವರು ತಮ್ಮ ಬಳಿ ಒಟ್ಟು ₨ 85.87 ಕೋಟಿಯ (ಸ್ಥಿರ ಮತ್ತು ಚರಾಸ್ತಿ ಸೇರಿ) ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಇದು ಕಳೆದ ಬಾರಿಗಿಂತ ₨ 36.71 ಕೋಟಿ ಹೆಚ್ಚಳವಾಗಿದೆ. 2013ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಅವರು ₨ 47.16 ಕೋಟಿಯ ಆಸ್ತಿ ಘೋಷಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.