ADVERTISEMENT

`ಸಮರ್ಪಕ ಕಸ ವಿಂಗಡಣೆ: ಸಮಸ್ಯೆಗೆ ಪರಿಹಾರ ಸಾಧ್ಯ'

​ಪ್ರಜಾವಾಣಿ ವಾರ್ತೆ
Published 2 ಜನವರಿ 2013, 19:59 IST
Last Updated 2 ಜನವರಿ 2013, 19:59 IST
ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಬುಧವಾರ ನಡೆದ ಪ್ರೊ.ಎಂ.ನಾರಾಯಣರಾವ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಕಿರುಚಿತ್ರ ನಿರ್ದೇಶಕ ಎಂ.ನರಸಿಂಹಮೂರ್ತಿ ಅವರು `ಘನತ್ಯಾಜ್ಯ ನಿರ್ವಹಣೆ' ಬಗ್ಗೆ ಮಾತನಾಡಿದರು
ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಬುಧವಾರ ನಡೆದ ಪ್ರೊ.ಎಂ.ನಾರಾಯಣರಾವ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಕಿರುಚಿತ್ರ ನಿರ್ದೇಶಕ ಎಂ.ನರಸಿಂಹಮೂರ್ತಿ ಅವರು `ಘನತ್ಯಾಜ್ಯ ನಿರ್ವಹಣೆ' ಬಗ್ಗೆ ಮಾತನಾಡಿದರು   

ಬೆಂಗಳೂರು: `ನಗರದ ಕಸವನ್ನು ಸಮರ್ಪಕವಾಗಿ ವಿಂಗಡಣೆ ಮಾಡಿ ವಿಲೇವಾರಿ ಮಾಡುವುದರಿಂದ ಘನತ್ಯಾಜ್ಯದ ಸಮಸ್ಯೆಯನ್ನು ತಕ್ಕಮಟ್ಟಿಗೆ ತಗ್ಗಿಸಲು ಸಾಧ್ಯವಿದೆ' ಎಂದು ಕಿರುಚಿತ್ರ ನಿರ್ದೇಶಕ ಎಂ.ನರಸಿಂಹಮೂರ್ತಿ ಹೇಳಿದರು.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಬುಧವಾರ ನಡೆದ ಪ್ರೊ.ಎಂ.ನಾರಾಯಣರಾವ್ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ `ಘನತ್ಯಾಜ್ಯ ನಿರ್ವಹಣೆ' ವಿಷಯ ಕುರಿತು ಅವರು ಮಾತನಾಡಿದರು.
`ಬೆಂಗಳೂರಿನಲ್ಲಿ ತ್ಯಾಜ್ಯ ನಿರ್ವಹಣೆ ಸದ್ಯ ದೊಡ್ಡ ಸಮಸ್ಯೆಯಾಗಿದೆ. ಒಂದು ಕಾಲಕ್ಕೆ ತ್ಯಾಜ್ಯ ನಿರ್ವಹಣೆಯಲ್ಲಿ ಬೆಂಗಳೂರಿನ ಮಾದರಿಯನ್ನು ಇತರೆ ನಗರಗಳು ಅನುಸರಿಸುತ್ತಿದ್ದವು.

ಹಿಂದೆ ನಗರದ ಹಸಿತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸಿ ಕೃಷಿಗೆ ಬಳಸಲಾಗುತ್ತಿತ್ತು. ಆದರೆ, ದಿನ ಕಳೆದಂತೆ ಪ್ಲಾಸ್ಟಿಕ್ ಮತ್ತಿತರ ತ್ಯಾಜ್ಯ ಹೆಚ್ಚಾಗಿ, ಕಸದ ಸಮರ್ಪಕ ವಿಂಗಡಣೆಯಾಗದೇ ಸಮಸ್ಯೆ ಹೆಚ್ಚಾಗಿದೆ. ಸಮರ್ಪಕ ಕಸ ವಿಂಗಡಣೆಯೇ ಸದ್ಯ ಈ ಸಮಸ್ಯೆಗೆ ಪರಿಹಾರ' ಎಂದು ಅವರು ಹೇಳಿದರು.

`ಘನತ್ಯಾಜ್ಯದಿಂದ ಬಯೊಗ್ಯಾಸ್ ಉತ್ಪಾದನೆ ಮಾಡುವಲ್ಲಿ ಚೀನಾ ಮುಂಚೂಣಿಯಲ್ಲಿದೆ. ತ್ಯಾಜ್ಯವನ್ನು ಸರಿಯಾಗಿ ವಿಂಗಡಣೆ ಮಾಡಿ, ಗೊಬ್ಬರ, ಬಯೊಗ್ಯಾಸ್ ಉತ್ಪಾದನೆಗೆ ತೊಡಗಬೇಕು. ತ್ಯಾಜ್ಯದ ಸಮಸ್ಯೆ ಈಗಾಗಲೇ ಹೆಚ್ಚಾಗಿದೆ. ಇದನ್ನು ಸರಿಯಾಗಿ ನಿರ್ವಹಿಸದೆ ಹೀಗೇ ಬಿಟ್ಟರೆ ಇದು ಇನ್ನಷ್ಟು ಜಟಿಲವಾಗಲಿದೆ' ಎಂದು ಕಳವಳ ವ್ಯಕ್ತಪಡಿಸಿದರು.

`ಕಸದ ವಿಲೇವಾರಿ ಸಮರ್ಪಕವಾಗಿ ಆಗದೇ ಹೋದರೆ ಕಸಕ್ಕೆ ಬೆಂಕಿ ಹಾಕುವುದು ಹೆಚ್ಚಾಗುತ್ತದೆ. ಪ್ಲಾಸ್ಟಿಕ್, ಆಸ್ಪತ್ರೆ ಹಾಗೂ ಕೈಗಾರಿಕೆಗಳ ತ್ಯಾಜ್ಯಕ್ಕೆ ಬೆಂಕಿ ಹಾಕುವುದರಿಂದ ಹೊರಡುವ ಹೊಗೆ ಆರೋಗ್ಯಕ್ಕೆ ಅಪಾಯಕಾರಿ. ಅಲ್ಲದೇ ಮಳೆ ಬಂದು ದ್ರವರೂಪದ ತ್ಯಾಜ್ಯ ನೀರಿನ ಮೂಲಗಳನ್ನು ಸೇರಿ ಅವುಗಳೂ ಮಲಿನಗೊಳ್ಳುತ್ತವೆ. ಈ ಎಲ್ಲ ಅಪಾಯಗಳನ್ನು ತಪ್ಪಿಸಲು ನಗರದ ನಾಗರಿಕರೆಲ್ಲರೂ ತ್ಯಾಜ್ಯ ವಿಂಗಡಣೆಗೆ ಗಂಭೀರವಾಗಿ ಪ್ರಯತ್ನಿಸಬೇಕು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT