ಬೆಂಗಳೂರು: ‘ಬೆಂಗಳೂರು ಪೂರ್ವ ತಾಲ್ಲೂಕು, ಕೆ.ಆರ್.ಪುರ ಹೋಬಳಿ, ಥಣಿಸಂದ್ರ ಗ್ರಾಮದ ಸರ್ವೆ ನಂ. 112 ರಲ್ಲಿನ 21 ಎಕರೆ ಸರ್ಕಾರಿ ಜಮೀನು ಸಾರ್ವಜನಿಕ ಉದ್ದೇಶಕ್ಕಾಗಿ ಬಳಕೆಯಾಗದೆ, ದುರುಪಯೋಗವಾಗುತ್ತಿರುವ ಕುರಿತು ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಕಾನೂನು ರಕ್ಷಣಾ ವೇದಿಕೆಯ ಅಧ್ಯಕ್ಷ
ಎನ್.ರಾಮಾಂಜಿನಪ್ಪ ಅವರು ಒತ್ತಾಯಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈ ಜಮೀನು ಉಚಿತ ಕಣ್ಣಿನ ಆಸ್ಪತ್ರೆ, ಅನಾಥಾಶ್ರಮ, ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡುವವರಿಗೆ ತರಬೇತಿ ಕೇಂದ್ರಗಳನ್ನು ತೆರೆಯಲು ಮಂಜೂರಾಗಿತ್ತು. ಜಮೀನು ಮಂಜೂರಾಗಿ 42 ವರ್ಷಗಳೇ ಕಳೆದಿವೆ. ಆದರೆ, ಸಾರ್ವಜನಿಕರ ಸೇವೆಗೆ ಸದ್ಬಳಕೆಯಾಗದೆ ದುರುಪಯೋಗವಾಗುತ್ತಿದೆ’ ಎಂದರು.
‘ಕೂಡಲೇ ಸರ್ಕಾರ ಈ ಜಮೀನನ್ನು ಮುಟ್ಟುಗೋಲು ಹಾಕಿಕೊಂಡು ಸರ್ಕಾರಿ ಆಸ್ಪತ್ರೆ ಹಾಗೂ ಸರ್ಕಾರಿ ಬಸ್ ನಿಲ್ದಾಣವನ್ನು ತೆರೆಯಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.