ADVERTISEMENT

ಸಾರಿಗೆ ವ್ಯವಸ್ಥೆ ಸುಧಾರಣೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 18:30 IST
Last Updated 2 ಫೆಬ್ರುವರಿ 2011, 18:30 IST


ಬೆಂಗಳೂರು: ನಗರದ ಸಾರಿಗೆ ಸೌಕರ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ಜೆರಿಮ್ (ಗ್ಲೋಬಲ್ ಇನಿಷಿಯೇಟಿವ್ ಫಾರ್ ರಿಸ್ಟ್ರಕ್ಚರಿಂಗ್ ಎನ್‌ವಿರಾನ್‌ಮೆಂಟ್ ಅಂಡ್ ಮ್ಯಾನೇಜ್‌ಮೆಂಟ್) ಸಂಸ್ಥೆಯು ವರದಿಯನ್ನು ಸಿದ್ಧಪಡಿಸಿ, ಸಾರಿಗೆ ಸಚಿವ ಆರ್.ಅಶೋಕ ಅವರಿಗೆ ಹಸ್ತಾಂತರಿಸಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಶ್ಯಾಮ್ ಸುಂದರ್ ಎಸ್. ಪಾಣಿ, ‘ಹಲವು ನಗರಗಳಿಗೆ ಇಂತಹದ್ದೇ ಯೋಜನೆಗಳನ್ನು ರೂಪಿಸಿ ಕೊಟ್ಟಿದ್ದೇವೆ. ಈಗಿನ ಸಂಚಾರಿ ವ್ಯವಸ್ಥೆಯನ್ನು ಕೈಬಿಟ್ಟು, ಹೊಸ ಹಾಗೂ ದೀರ್ಘಕಾಲಿಕ ವ್ಯವಸ್ಥೆಯನ್ನು ರೂಪಿಸಬೇಕಾಗಿದೆ’ ಎಂದು ಹೇಳಿದರು.

ವರದಿ ನೀಡಿರುವ ಸಲಹೆಗಳು: ನಗರ ಯೋಜನೆಗೆ ಒತ್ತು ಕೊಡುವ ಏಕೀಕೃತ ಸಾರಿಗೆ ನೀತಿ. ಅತಿ ಒತ್ತಡದ ಸಂಚಾರ ಇರುವ ರಸ್ತೆಗಳಲ್ಲಿ ಒತ್ತಡದ ವೇಳೆಯಲ್ಲಿ ಬಳಕೆಗಾಗಿ ಶುಲ್ಕ. ಪ್ರಸ್ತುತ ಇರುವ ನಿಗದಿತ ಸ್ಥಳ ತಲುಪುವ ಬಸ್ ಸೇವೆಗಳ ಬದಲಿಗೆ ಮಾರ್ಗ ಆಧಾರಿತ ಬಸ್ ಸೇವೆ. ಸಾರಿಗೆ ಅನುಕೂಲತೆಗಾಗಿ ತಂತ್ರಜ್ಞಾನದ ಅಳವಡಿಕೆ. ರಸ್ತೆಯ ಎಡಬದಿಯಲ್ಲಿ ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ ಮತ್ತು ಬಲಬದಿಯಲ್ಲಿ ನಾಲ್ಕು ಚಕ್ರಗಳ ವಾಹನಗಳಿಗೆ ಸಂಚರಿಸುವಂತೆ ಸೂಚಿಸುವುದು.

ಕೆಲವು ರಸ್ತೆಗಳಲ್ಲಿ ಕಡ್ಡಾಯವಾಗಿ ಸೈಕಲ್ ಬಳಸುವಂತೆ ಸೂಚಿಸುವುದು. ಪ್ರಯಾಣಿಕರಲ್ಲಿ ಶಿಸ್ತು, ಕಾನೂನು ಹಾಗೂ ಸುವ್ಯವಸ್ಥೆ ಜಾರಿಗೆ ತರಲು ನಾಗರಿಕ ಪೊಲೀಸ್ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸಂಸ್ಥೆಯು ತನ್ನ ವರದಿಯಲ್ಲಿ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.