ಬೆಂಗಳೂರು: `ಸಮಾಜಘಾತುಕ ಶಕ್ತಿಗಳನ್ನು ಹತ್ತಿಕ್ಕುವಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಪ್ರಮುಖ ಪಾತ್ರ ವಹಿಸುತ್ತದೆ' ಎಂದು ಸಿಆರ್ಪಿಎಫ್ನ ದಕ್ಷಿಣ ವಿಭಾಗದ ಉಪ ಪೊಲೀಸ್ ಮಹಾನಿರ್ದೇಶಕ ಎಂ.ಎಸ್.ರಾಘವ ಹೇಳಿದರು.
ನಗರದ ಯಲಹಂಕದಲ್ಲಿರುವ ಸಿಆರ್ಪಿಎಫ್ ಪೆರೇಡ್ ಮೈದಾನದಲ್ಲಿ ಈಚೆಗೆ ನಡೆದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ಅವರು ಮಾತನಾಡಿದರು.
`ಸಿಆರ್ಪಿಎಫ್ 229ಕ್ಕಿಂತಲೂ ಹೆಚ್ಚು ತುಕಡಿಗಳನ್ನು ಹೊಂದಿದ್ದು, ಪ್ರಪಂಚದ ಅತಿ ದೊಡ್ಡ ಅರೆಸೇನಾ ಪಡೆಯಾಗಿದೆ. ಭಯೋತ್ಪಾದನೆ, ನಕ್ಸಲ್ ಚಟುವಟಿಕೆ ಹಾಗೂ ಆಂತರಿಕ ಸುರಕ್ಷತೆಯಂತಹ ಕ್ಲಿಷ್ಟ ಸವಾಲುಗಳನ್ನು ಎದುರಿಸುವಷ್ಟು ಸಮರ್ಥವಾಗಿದೆ.
ದೇಶದ ಯಾವುದೇ ಮೂಲೆಯಲ್ಲಿಯೂ ಅಹಿತಕರ ಘಟನೆಗಳು ಸಂಭವಿಸಿದಲ್ಲಿ, ಕೂಡಲೇ ಕೇಂದ್ರ ಸರ್ಕಾರದ ಅನುಮತಿ ಪಡೆದು ಸ್ಥಳಕ್ಕೆ ತೆರಳಿ ಕಾರ್ಯಪ್ರವೃತ್ತರಾಗುತ್ತೇವೆ. ಕುಟುಂಬ ಸದಸ್ಯರನ್ನು ತೊರೆದು ಸಿಬ್ಬಂದಿ ದೇಶದ ಭದ್ರತೆಗೆ ಒತ್ತು ಕೊಡುತ್ತಿರುವುದು ಹೆಮ್ಮೆಯ ಸಂಗತಿ' ಎಂದರು.
ನಂತರ ಮಾತನಾಡಿದ ದಕ್ಷಿಣ ವಿಭಾಗದ ಐಜಿಪಿ ಎನ್.ಆರ್.ಕೆ.ರೆಡ್ಡಿ ಮಾತನಾಡಿ, `ತರಬೇತಿ ಹಂತ ಪೂರ್ಣಗೊಳಿಸಿದ 945 ಮಂದಿ ಸಿಆರ್ಪಿಎಫ್ ಪಡೆಗೆ ಸೇರ್ಪಡೆಗೊಂಡಿದ್ದಾರೆ. ಅವರು 44 ವಾರಗಳ ಕಾಲ ಕಠಿಣ ತರಬೇತಿ ಪಡೆದಿದ್ದು, ರಾಷ್ಟ್ರದ ಶಾಂತಿ-ಸುವ್ಯವಸ್ಥೆ ಕಾಪಾಡಲು ಸನ್ನದ್ಧರಾಗಿದ್ದಾರೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.
ತರಬೇತಿ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದ ಶಿವಕುಮಾರ್, ಸನ್ನಿಕುಮಾರ್, ಕಿಶೋರ್ಸಿಂಗ್ ಅವರಿಗೆ ಬಹುಮಾನ ಮತ್ತು ಪಾರಿತೋಷಕ ನೀಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.