ಬೆಂಗಳೂರು: ಅಮೃತಹಳ್ಳಿ ಬಳಿಯ ಎ.ಕೆ.ಕಾಲೊನಿಯಲ್ಲಿ ಬುಧವಾರ ಸಿಲಿಂಡರ್ ಸ್ಫೋಟಗೊಂಡು ಒಂಬತ್ತು ಜನ ಗಾಯಗೊಂಡಿದ್ದಾರೆ. ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಒಡಿಶಾ ಮೂಲದ ಮುನಿಯಲ್ಲಪ್ಪ, ಶ್ರೀನಿವಾಸ, ಮಂಜೇಶ್, ಪ್ರದೀಪ್, ಪೂರ್ಣಚಂದ್ರ ಬಿಸ್ವಾಲ್, ಮಧು ಮಹಪಾತ್ರ, ಸಂಜಯ್ ಸಾಹು, ಬಾಬುಲಾಲ್ ಮತ್ತು ಶಿಲ್ಲು ಸಾಹು ಗಾಯಗೊಂಡವರು. ಖಾಸಗಿ ಕಂಪೆನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ಗಳಾಗಿರುವ ಗಾಯಾಳುಗಳು ಎ.ಕೆ.ಪಾಳ್ಯದಲ್ಲಿ ಬಾಡಿಗೆ ಮನೆ ಪಡೆದು ವಾಸವಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು.
ಸಂಜೆ 5.30ರ ಸುಮಾರಿಗೆ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆ ಅಡುಗೆ ಅನಿಲ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡಿದೆ. ಘಟನೆಯಲ್ಲಿ ಮನೆಯ ಮೇಲ್ಛಾವಣಿ ಹಾರಿ ಹೋಗಿದ್ದು, ನೆರೆ ಮನೆಗಳು ಸಹ ಹಾನಿಗೊಳಗಾಗಿವೆ. ಮುನಿಯಲ್ಲಪ್ಪ ಮತ್ತು ಶ್ರೀನಿವಾಸ್ ಅವರ ಸ್ಥಿತಿ ಗಂಭೀರವಾಗಿದ್ದು, ಉಳಿದ ಗಾಯಾಳುಗಳು ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
`ಮನೆಯ ಹೊರಾಂಗಣದಲ್ಲಿ ಕುಳಿತಿದ್ದೆ. ಈ ವೇಳೆ ಸ್ಫೋಟದಿಂದ ಮನೆ ಛಿದ್ರವಾಯಿತು. ಮನೆಯ ಮೇಲ್ಛಾವಣಿ ಮತ್ತು ಕಿಟಕಿಗಳು ಹಾರಿ ಹೋದವು. ಘಟನೆಯಲ್ಲಿ ನನಗೂ ಸಣ್ಣ ಪುಟ್ಟ ಗಾಯಗಳಾದವು~ ಎಂದು ಭಾಗ್ಯಮ್ಮ ತಿಳಿಸಿದರು. ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಸಂಪಿಗೆಹಳ್ಳಿ ಪೊಲೀಸರು ಹೇಳಿದ್ದಾರೆ.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.