ADVERTISEMENT

ಸುಮಾ ಸುಧೀಂದ್ರಗೆ ವೀಣೆಶೇಷಣ್ಣ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2012, 19:30 IST
Last Updated 22 ಆಗಸ್ಟ್ 2012, 19:30 IST

ಬೆಂಗಳೂರು: ತುಮಕೂರು ವಿಶ್ವವಿದ್ಯಾಲಯದ ಡಾ.ಎಂ.ಎಸ್.ಸುಬ್ಬುಲಕ್ಷ್ಮೀ ಕಲಾ ಕೇಂದ್ರ ಮತ್ತು ವೀಣೆ ಶೇಷಣ್ಣ ಸ್ಮಾರಕ ಟ್ರಸ್ಟ್ ಜಂಟಿಯಾಗಿ ನೀಡುವ `ವೀಣೆ ಶೇಷಣ್ಣ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ~ಗೆ ವೀಣಾ ವಾದಕಿ ಡಾ.ಸುಮಾ ಸುಧೀಂದ್ರ ಹಾಗೂ `ಸ್ವರಮೂರ್ತಿ ವಿ.ಎನ್.ರಾವ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ~ಗೆ ಸಂಗೀತ ವಿದುಷಿ ಡಾ.ಆರ್.ವೇದವಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ.

ನಗರದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ವೀಣೆ ಶೇಷಣ್ಣ ಸ್ಮಾರಕ ಟ್ರಸ್ಟ್‌ನ ಅಧ್ಯಕ್ಷ ಪ್ರೊ.ಮೈಸೂರು ವಿ. ಸುಬ್ರಹ್ಮಣ್ಯಂ, `ಪ್ರಶಸ್ತಿಗಳು ತಲಾ 50 ಸಾವಿರ ರೂಪಾಯಿ ನಗದು, ವೀಣೆ ಶೇಷಣ್ಣನವರ ಪುತ್ಥಳಿ ಹಾಗೂ ಸನ್ಮಾನ ಪತ್ರಗಳನ್ನು ಹೊಂದಿರುತ್ತವೆ. ಇದೇ 25ರಂದು ರಾಜಭವನದಲ್ಲಿ ನಡೆಯುವ ಸಮಾರಂಭದಲ್ಲಿ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ.

ಹಿರಿಯ ನರ್ತಕಿ ಹಾಗೂ ನಟಿ ವೈಜಯಂತಿಮಾಲ ಬಾಲಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ, ವಿಧಾನ ಪರಿಷತ್ತಿನ ಮಾಜಿ ಸಭಾಪತಿ ಪ್ರೊ.ಬಿ.ಕೆ.ಚಂದ್ರಶೇಖರ್ ಮತ್ತು ರಾಷ್ಟ್ರೀಯ ಶಿಕ್ಷಣ ಮಂಡಳಿಯ ಅಧ್ಯಕ್ಷ ಡಾ.ಎ.ವಿ.ರಾಮರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ~ ಎಂದರು. `ಪ್ರಶಸ್ತಿ ಪ್ರದಾನ ದಿನದಂದೇ ತುಮಕೂರು ವಿಶ್ವವಿದ್ಯಾಲಯದ ಆವರಣದಲ್ಲಿ ಸಂಜೆ 6ರಿಂದ `ವೀಣೆಯ ಬೆಡಗು~ ಎಂಬ ಸಂಗೀತ ಕಾರ್ಯಕ್ರಮ ನಡೆಯಲಿದೆ.
 
ಈ ಕಾರ್ಯಕ್ರಮದಲ್ಲಿ ಸಂಗೀತ ವಿದುಷಿ ಡಾ.ಆರ್.ವೇದವಲ್ಲಿ ಹಾಗೂ ಗಾಯಕಿ ಡಾ.ಬಾಂಬೆ ಜಯಶ್ರೀ ರಾಮನಾಥನ್ ಅವರು ಗಾಯನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.  ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ರಾಷ್ಟ್ರೀಯ ಶಿಕ್ಷಣ ಮಂಡಳಿಯ ಅಧ್ಯಕ್ಷ ಡಾ.ಎ.ವಿ.ರಾಮರಾವ್ ಅವರು ಈ ಪ್ರಶಸ್ತಿಗಳ ಪ್ರಾಯೋಜಕರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.