
ಬೆಂಗಳೂರು: `ನಮ್ಮ ಮೆಟ್ರೊ'ದ ಮೊದಲ ಹಂತದಲ್ಲಿನ ಸುರಂಗ ಮಾರ್ಗ ನಿರ್ಮಾಣ ಕಾರ್ಯ ವೇಗ ಪಡೆದುಕೊಂಡಿದೆ. ಇತ್ತೀಚೆಗಷ್ಟೆ ನಗರಕ್ಕೆ ಬಂದ ಸೆಲಿ ಕಂಪೆನಿಯ ಸುರಂಗ ಕೊರೆಯುವ ಯಂತ್ರ (ಟಿಬಿಎಂ) ಕೂಡ ಜಕ್ಕರಾಯನಕೆರೆ ಮೈದಾನದಿಂದ ಮೆಜೆಸ್ಟಿಕ್ ಕಡೆಗೆ ಸುರಂಗ ನಿರ್ಮಿಸುವ ಕಾರ್ಯವನ್ನು ಪ್ರಾರಂಭಿಸಿದೆ. ಇದರೊಂದಿಗೆ ರಾಜಧಾನಿಯಲ್ಲಿ ಒಟ್ಟು ಆರು ಯಂತ್ರಗಳು ಸುರಂಗ ನಿರ್ಮಾಣ ಕಾರ್ಯದಲ್ಲಿ ಸಕ್ರಿಯವಾದಂತಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಗಡಿ ರಸ್ತೆ ಪ್ರವೇಶ ದ್ವಾರ ಪೂರ್ವ- ಪಶ್ಚಿಮ ಕಾರಿಡಾರ್ನಲ್ಲಿ ಮೆಜೆಸ್ಟಿಕ್ನಿಂದ ವಿಧಾನಸೌಧದವರೆಗೆ ಹಾಗೂ ಮಿನ್ಸ್ಕ್ ಚೌಕದಿಂದ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ಜೋಡಿ ಸುರಂಗ ಮಾರ್ಗ ಈಗಾಗಲೇ ನಿರ್ಮಾಣಗೊಂಡಿದೆ.
ವಿಧಾನಸೌಧದಿಂದ ಮಿನ್ಸ್ಕ್ಚೌಕದವರೆಗೆ ಪೈಕಿ ಹೆಲೆನ್ ಯಂತ್ರವು 313 ಮೀಟರ್ಗಳಷ್ಟು ಹಾಗೂ ಮಾರ್ಗರೀಟಾ ಯಂತ್ರವು 49 ಮೀಟರ್ಗಳಷ್ಟು ಸುರಂಗ ನಿರ್ಮಿಸಿದೆ.
ಸಂಪಿಗೆ ರಸ್ತೆಯಿಂದ ಕೆ.ಆರ್ ರಸ್ತೆವರೆಗಿನ ಉತ್ತರ- ದಕ್ಷಿಣ ಕಾರಿಡಾರ್ನಲ್ಲಿ ಶಿವಶಂಕರ್ ವೃತ್ತದಿಂದ ವಾಣಿ ವಿಲಾಸ ಆಸ್ಪತ್ರೆವರೆಗಿನ ಜೋಡಿ ಸುರಂಗ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಈ ಜೋಡಿ ಸುರಂಗವನ್ನು ನಿರ್ಮಿಸಿದ `ಕಾವೇರಿ' ಮತ್ತು `ಕೃಷ್ಣಾ' ಯಂತ್ರಗಳು ವಾಣಿ ವಿಲಾಸ ಆಸ್ಪತ್ರೆಯಿಂದ ಚಿಕ್ಕಪೇಟೆ ನಿಲ್ದಾಣದ ಕಡೆಗೆ ಸುರಂಗ ನಿರ್ಮಿಸಲು ಸಜ್ಜಾಗುತ್ತಿವೆ. ಉತ್ತರ ಭಾಗದಲ್ಲಿ ಸುರಂಗ ಕೊರೆಯುವ ಕಾರ್ಯ ಪ್ರಾರಂಭಿಸಿರುವ ಯಂತ್ರಕ್ಕೆ `ಗೋದಾವರಿ' ಎಂದು ನಾಮಕರಣ ಮಾಡಲಾಗಿದೆ.
ಸಿಬ್ಬಂದಿಗೆ ತರಬೇತಿ: ಹೊಸದಾಗಿ ನೇಮಕಗೊಳ್ಳುವ ಸಿಬ್ಬಂದಿಗೆ ತರಬೇತಿ ನೀಡುವ ಬಿಎಂಆರ್ಸಿಎಲ್ ತರಬೇತಿ ಸಂಸ್ಥೆಯಲ್ಲಿ ವಿಡಿಯೋ ಸಂವಾದದ ವ್ಯವಸ್ಥೆಯನ್ನು ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್.ಶಿವಶೈಲಂ ಇತ್ತೀಚೆಗೆ ಉದ್ಘಾಟಿಸಿದರು. ಟ್ರೈನಿಗಳ ಏಳನೇ ತಂಡವು ತರಬೇತಿ ಕಾರ್ಯಕ್ರಮ ಪೂರ್ಣಗೊಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.