ಬೆಂಗಳೂರು: ಕಾನೂನು ಮತ್ತು ಮಾಪನ ಶಾಸ್ತ್ರ ಇಲಾಖೆಯ ದೈಹಿಕ ಸಹಾಯಕಿಯೊಬ್ಬರನ್ನು ಬೆದರಿಸಿ 45,000 ರೂಪಾಯಿ ಸುಲಿಗೆ ಮಾಡುತ್ತಿದ್ದ ತುಮಕೂರಿನ `ವಿಸ್ಮಯ ಕನ್ನಡ~ ವಾರಪತ್ರಿಕೆ ಸಂಪಾದಕ ಸೈಫುಲ್ಲಾ ಅವರನ್ನು ಶುಕ್ರವಾರ ಬಂಧಿಸಿರುವ ಲೋಕಾಯುಕ್ತ ಪೊಲೀಸರು, ಕಾಟನ್ಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ರಾಜಾಜಿನಗರದ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕರ ಕಚೇರಿಯಲ್ಲಿ ದೈಹಿಕ ಸಹಾಯಕಿ ಹುದ್ದೆಯಲ್ಲಿರುವ ಕೆ.ಪುಷ್ಪಾವತಿ ವಿರುದ್ಧ ಇಲಾಖೆ ಮುಖ್ಯಸ್ಥರಿಗೆ ಅನಾಮಧೇಯ ದೂರು ಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ಹಿರಿಯ ಅಧಿಕಾರಿಗಳು ಪ್ರಕರಣವನ್ನು ಮುಕ್ತಾಯಗೊಳಿಸಿದ್ದರು. ಈ ಕುರಿತ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆ ಅಡಿ ಪಡೆದಿದ್ದ ಸೈಫುಲ್ಲಾ, ಒಂದು ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಲೋಕಾಯುಕ್ತ, ಸಿಐಡಿಗೆ ದೂರು ಸಲ್ಲಿಸುವ ಅಥವಾ ಪತ್ರಿಕೆಯಲ್ಲಿ ವರದಿ ಪ್ರಕಟಿಸುವ ಬೆದರಿಕೆ ಒಡ್ಡಿದ್ದರು.
ಈ ಹಿಂದೆಯೂ ತಮ್ಮ ಕಚೇರಿಯ ಇತರೆ ಅಧಿಕಾರಿಗಳು ಮತ್ತು ನೌಕರರನ್ನು ಬೆದರಿಸಿ ಆರೋಪಿಯು ಹಣ ವಸೂಲಿ ಮಾಡಿರುವುದನ್ನು ಪುಷ್ಪಾವತಿ ತಿಳಿದಿದ್ದರು. ತಮಗೆ ಹಣದ ಬೇಡಿಕೆ ಇಡುತ್ತಿದ್ದಂತೆ ಬೆಂಗಳೂರು ನಗರ ಲೋಕಾಯುಕ್ತ ಪೊಲೀಸರನ್ನು ಸಂಪರ್ಕಿಸಿದ ಅವರು, ನೆರವಿಗೆ ಬರುವಂತೆ ಮನವಿ ಮಾಡಿದ್ದರು. ಇತರೆ ವಿಭಾಗದಡಿ ಪ್ರಕರಣ ದಾಖಲಿಸಿಕೊಂಡ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದರು.
ಲೋಕಾಯುಕ್ತ ಪೊಲೀಸರ ಸೂಚನೆಯಂತೆ ಪುಷ್ಪಾವತಿ ಅವರು ಸೈಫುಲ್ಲಾ ಜೊತೆ ಮತ್ತೆ ಮಾತುಕತೆ ನಡೆಸಿದರು. ಒಂದು ಲಕ್ಷ ರೂಪಾಯಿ ನೀಡಲು ತಮಗೆ ಸಾಧ್ಯವಿಲ್ಲ ಎಂದರು. ಬಳಿಕ, `ರೂ 45,000 ನೀಡಲು ಮಾತ್ರ ಸಾಧ್ಯ~ ಎಂದು ತಿಳಿಸಿದಾಗ ಒಪ್ಪಿಕೊಂಡಿದ್ದರು.
ಶುಕ್ರವಾರ ಮೆಜೆಸ್ಟಿಕ್ ಬಸ್ ನಿಲ್ದಾಣ ಸಮೀಪದ ಸಾಗರ್ ಹೋಟೆಲ್ನಲ್ಲಿ ಹಣ ಪಡೆಯುತ್ತಿದ್ದಾಗ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿದರು. `ಖಾಸಗಿ ವ್ಯಕ್ತಿಗಳಿಗೆ ಸಂಬಂಧಿಸಿದ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಿದ ಬಳಿಕ ಮುಂದಿನ ತನಿಖೆಗಾಗಿ ಕಾಟನ್ಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಲಾಗಿದೆ. ಮೊಕದ್ದಮೆಯನ್ನೂ ಠಾಣೆಗೆ ವರ್ಗಾಯಿಸಲಾಗಿದೆ~ ಎಂದು ಲೋಕಾಯುಕ್ತ ಡಿಐಜಿ ಜೆ.ಅರುಣ್ ಚಕ್ರವರ್ತಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.