ADVERTISEMENT

ಸೂರಿಲ್ಲದ ಜನರ ಭೇಟಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2011, 18:55 IST
Last Updated 5 ಆಗಸ್ಟ್ 2011, 18:55 IST

ತಲಘಟ್ಟಪುರ:  ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತ ಶಿವಬಸವಯ್ಯ ಅವರು ಇತ್ತೀಚೆಗೆ ಕೋಣನಕುಂಟೆಯಲ್ಲಿ ಸೂರಿಲ್ಲದ ಜನರನ್ನು ಭೇಟಿ ಮಾಡಿ ಅವರ ಕಷ್ಟ ಸುಖ ವಿಚಾರಿಸಿದರು.

ಸೂರಿಲ್ಲದ ಜನರಿಗಾಗಿ ಕೋಣನಕುಂಟೆ ಸೌದಾಮಿನಿ ಕಲ್ಯಾಣ ಮಂಟಪದಲ್ಲಿ ಉಚಿತ ಆರೋಗ್ಯ ತಪಾಸಣೆ, ಚಿಕಿತ್ಸೆ, ಸ್ನಾನ ಮತ್ತು ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು. ಜಂಟಿ ಆಯುಕ್ತರು ಸೂರಿಲ್ಲದ ಜನರೊಂದಿಗೆ ಸಹ ಭೋಜನ ಮಾಡಿದರಲ್ಲದೇ ಅವರೊಂದಿಗೆ ಇಡೀ ಒಂದು ದಿನ ಕಳೆದರು.

ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಪಾಲಿಕೆ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಂತರ ಮಾತನಾಡಿದ ಅವರು, `ವಲಯದ ವ್ಯಾಪ್ತಿಯಲ್ಲಿ ಬರುವ ವಸಂತಪುರ, ಜಂಬೂ ಸವಾರಿ ದಿಣ್ಣೆಯ ಸಮುದಾಯ ಭವನದಲ್ಲಿ ಮಲಗುವ ವ್ಯವಸ್ಥೆ, ಊಟೋಪಚಾರ, ಚಿಕಿತ್ಸೆ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದು ತಜ್ಞ ವೈದ್ಯರಿಂದ ಚಿಕಿತ್ಸೆ ನೀಡಲಾಗುತ್ತಿದೆ. ವಿಕ್ಟೋರಿಯಾ, ಬೌರಿಂಗ್, ವಾಣಿ ವಿಲಾಸ, ಕೆಸಿ ಜನರಲ್, ಸಂಜಯ ಗಾಂಧಿ ಮತ್ತಿತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುವುದು~ ಎಂದರು.

ಬೀದಿಗಳಲ್ಲಿ ವಾಸಿಸುವ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಕಡೆ ಗಮನ ಹರಿಸಿ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಸುರಭಿ ಸಂಸ್ಥೆ ವತಿಯಿಂದ ಮಾಡಲಾಗುತ್ತಿದೆ ಎಂದು ಉಪ ಆಯುಕ್ತ ರಾಮಶೆಟ್ಟಿಗಾರ್ ತಿಳಿಸಿದರು. ಸುರಭಿ ಸಂಸ್ಥೆಯ ಪಾಟೀಲ್, ಉಪ ಆರೋಗ್ಯ ಅಧಿಕಾರಿ ಡಾ.ಸುರೇಶ್, ಪಾಲಿಕೆಯ ಹಲವು ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.