ಬೆಂಗಳೂರು: ಗವಿಪುರದ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಸೂರ್ಯನ ರಶ್ಮಿಯು ಗರ್ಭ ಗುಡಿಯಲ್ಲಿರುವ ಶಿವಲಿಂಗವನ್ನು ಸ್ಪರ್ಶಿಸುವ ಮೂರು ನಿಮಿಷಗಳ ಸೃಷ್ಟಿ ಕೌತುಕವನ್ನು ಜನರು ಕಣ್ತುಂಬಿಕೊಂಡರು.
ಶಿವ- ಸೂರ್ಯ ಒಂದೇ ಕಡೆ ಮುಖಾಮುಖಿಯಾಗುವ ಉತ್ತರಾಯಣ ಪುಣ್ಯಕಾಲದ ಈ ಅಪರೂಪದ ದರ್ಶನ ಪಡೆಯಲು ಬಂದಿದ್ದ ಸಾವಿರಾರು ಭಕ್ತರಿಗಾಗಿ ದೇವಸ್ಥಾನದ ಹೊರಗಡೆ ವಿಶೇಷ ವ್ಯವಸ್ಥೆ ಮಾಡಲಾಗಿತ್ತು.
ಗರ್ಭಗುಡಿಯಲ್ಲಿ ನಡೆಯುವ ವಿದ್ಯಮಾನವನ್ನು ಭಕ್ತರು ವೀಕ್ಷಿಸಲು ಅನುಕೂಲವಾಗುವಂತೆ ದೇವಸ್ಥಾನದ ಬಳಿ ದೊಡ್ಡ ಪರದೆಗಳು ಮತ್ತು ಟಿ.ವಿ.ಗಳನ್ನು ಅಳವಡಿಸಲಾಗಿತ್ತು. ಆದರೂ, ದೇವಸ್ಥಾನದೊಳಗೆ ನುಗ್ಗಲು ಕೆಲ ಜನರು ಪ್ರಯತ್ನಿಸಿದರಾದರೂ ಅದಕ್ಕೆ ಪೊಲೀಸರು ತಡೆಯೊಡ್ಡಿದರು.
ಸೂರ್ಯ ರಶ್ಮಿ ಸ್ಪರ್ಶದ ನಂತರ ಭಕ್ತರಿಗೆ ಎಳ್ಳು, ಬೆಲ್ಲ ಹಂಚಿ ದೇವಸ್ಥಾನದೊಳಗೆ ಮುಕ್ತ ದರ್ಶನಕ್ಕೆ ರಾತ್ರಿ 10ರವರೆಗೆ ಅವಕಾಶ ಕಲ್ಪಿಸಿಕೊಡಲಾಯಿತು. ಅನೇಕ ಗಣ್ಯರು ‘ಅಪೂರ್ವ ಸಂಗಮ’ಕ್ಕೆ ಸಾಕ್ಷಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.