ಬೆಂಗಳೂರು: ನಗರದಲ್ಲಿ ಭಾನುವಾರ ನಡೆದ ಯಾದವ ಸಮಾವೇಶದ ಸಂದರ್ಭದಲ್ಲಿ ಸೆಂಟ್ರಲ್ ಕಾಲೇಜು ಕ್ರಿಕೆಟ್ ಮೈದಾನದಲ್ಲಿ ಅಕ್ರಮವಾಗಿ ವಾಹನಗಳನ್ನು ನಿಲ್ಲಿಸಿ ಮೈದಾನ ಹಾಳುಗೆಡವಲಾ ಗಿದೆ ಎಂದು ಆರೋಪಿಸಿ ಬೆಂಗಳೂರು ವಿಶ್ವವಿದ್ಯಾ ಲಯವು ಸಂಘಟಕರು, ಉಪ್ಪಾರಪೇಟೆ ಸಂಚಾರ ಪೊಲೀಸರು, ಕೆಎಸ್ಆರ್ಟಿಸಿ, ಬಿಎಂಟಿಸಿ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ.
ಕರ್ನಾಟಕ ರಾಜ್ಯ ಯಾದವ ಸಂಘದ ವತಿಯಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಸಮಾವೇಶ ನಡೆದಿತ್ತು. ಸಾವಿರಾರು ಮಂದಿ ಪಾಲ್ಗೊಂಡಿದ್ದರು. ಈ ವೇಳೆ ಮೈದಾನಕ್ಕೆ ಅಕ್ರಮವಾಗಿ ಪ್ರವೇಶಿಸಿ ಸುಮಾರು 300 ಬಸ್ಗಳು, 250 ಕಾರುಗಳು, ಖಾಸಗಿ ವಾಹನಗಳನ್ನು ನಿಲುಗಡೆ ಮಾಡಲಾಗಿತ್ತು. ಇದಕ್ಕೆ ಸಂಚಾರ ಪೊಲೀಸರ ಕುಮ್ಮಕ್ಕು ಇದೆ ಎಂಬುದು ವಿವಿ ಆರೋಪ.
ವಾಹನ ನಿಲುಗಡೆಯಿಂದಾಗಿ ಮೈದಾನದ ಗೇಟ್ ಧ್ವಂಸವಾಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ಟ್ರೇಲಿಯನ್ ಹುಲ್ಲುಹಾಸು ಹಾಳಾಗಿದೆ. 60 ಅಡಿ ಉದ್ದದ ಕಾಂಪೌಂಡ್ ನೆಲಸಮವಾಗಿದೆ. ಮೈದಾನದ ತುಂಬಾ ಕಸ ರಾಶಿ ಬಿದ್ದಿದೆ.
ಬೆಂಗಳೂರು ವಿವಿಯ ಅಂತರ್ ಕಾಲೇಜು ಕ್ರಿಕೆಟ್ ಪಂದ್ಯಾಟ ಈ ಮೈದಾನದಲ್ಲಿ ನಡೆಯುತ್ತಿದ್ದು, ವಿದ್ಯಾರ್ಥಿಗಳು ಸೋಮವಾರ ಬೆಳಿಗ್ಗೆ ಕ್ರಿಕೆಟ್ ಆಡಲು ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ.
ವಿವಿ ದೈಹಿಕ ಶಿಕ್ಷಕ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಮುನಿ ರೆಡ್ಡಿ ಅವರು ಯಾದವ ಸಂಘದ ಸಮಾವೇಶದ ಸಂಘಟನಾ ಕಾರ್ಯದರ್ಶಿ, ಉಪಾ ಧ್ಯಕ್ಷ, ಉಪ್ಪಾರಪೇಟೆ ಸಂಚಾರ ಇನ್ಸ್ಪೆಕ್ಟರ್, ಕೆಎಸ್ ಆರ್ಟಿಸಿ ಹಾಗೂ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶ ಕರ ವಿರುದ್ಧ ದೂರು ನೀಡಿದ್ದಾರೆ. ಒಟ್ಟಾರೆ ₨38 ಲಕ್ಷ ನಷ್ಟ ಉಂಟಾಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.